ನನಗೇನಾಗಿಲ್ಲ, ಆರಾಮಾಗಿದ್ದೀನಿ: ಉಪೇಂದ್ರ

ನಟ ಉಪೇಂದ್ರ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸುದ್ದಿ ಅಭಿಮಾನಿಗಳಿಗೆ ಆತಂಕ ತಂದಿದ್ದು, ಆದರೆ ತಾವು ಆರಾಮವಾಗಿರುವುದಾಗಿ ಸ್ವತಃ ಉಪೇಂದ್ರ ತಿಳಿಸಿದ್ದರು.
ಸಿನಿಮಾವೊಂದರ ಚಿತ್ರೀಕರಣ ಸಮಯದಲ್ಲಿ ಉಸಿರಾಟದ ಸಮಸ್ಯೆ ಎದುರಿಸಿದ್ದ ಉಪೇಂದ್ರ ಅವರನ್ನು ನೆಲಮಂಗಲದ ಸಮೀಪ ಹರ್ಷಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೆಲವೇ ಗಂಟೆಗಳಲ್ಲಿ ಉಪೇಂದ್ರ ಪೂರ್ಣವಾಗಿ ಚೇತರಿಸಿಕೊಂಡಿದ್ದಲ್ಲದೆ, ಅವರು ಮತ್ತೆ ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದಾರೆ. ತಮಗೇನೂ ಆಗಿಲ್ಲ, ಆತಂಕ ಪಡುವ ಅಗತ್ಯವಿಲ್ಲವೆಂದು ವಿಡಿಯೋ ಮೂಲಕ ಉಪೇಂದ್ರ ಹೇಳಿದ್ದಾರೆ.
ಶೂಟಿಂಗ್ ಸೆಟ್ಗೆ ವಾಪಸ್ಸಾಗುವ ವೇಳೆ ವಿಡಿಯೋ ಒಂದರಲ್ಲಿ ಮಾತನಾಡಿರುವ ಉಪೇಂದ್ರ, ”ನನಗೇನೂ ಆಗಿಲ್ಲ. ಆರಾಮವಾಗಿದ್ದೇನೆ. ನೋಡಿ ಶೂಟಿಂಗ್ ಸಹ ಮುಂದುವರೆಸುತ್ತಿದ್ದೇನೆ ಎಂದು ಶೂಟಿಂಗ್ ಸೆಟ್ ಅನ್ನು ತೋರಿಸಿದ್ದಾರೆ. ಫೈಟ್ ಮಾಸ್ಟರ್ ಥ್ರಿಲ್ಲರ್ ಮಂಜು ಸಹ ನಮ್ಮ ಜೊತೆಯಲ್ಲಿಯೇ ಇದ್ದಾರೆ ನೋಡಿ” ಎಂದು ಥ್ರಿಲ್ಲರ್ ಮಂಜುವನ್ನು ಸಹ ವಿಡಿಯೋದಲ್ಲಿ ತೋರಿಸಿದ್ದಾರೆ.
ಮೋಹನ್ ಬಿಕಿರಿ ಸ್ಟುಡಿಯೋ, ಡಸ್ಟ್ ಅಲರ್ಜಿ ಆಗಿತ್ತು, ಕೆಮ್ಮು ಸ್ವಲ್ಪ ಬಂದಿತ್ತು ಅಷ್ಟೆ. ಆರಾಮವಾಗಿದ್ದೇನೆ, ಶೂಟಿಂಗ್ ಸಹ ಸ್ಟಾರ್ಟ್ ಮಾಡ್ತಾ ಇದ್ದೀನಿ. ಯಾರೂ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದರು.
ಆಸ್ಪತ್ರೆಯಿಂದ ಬಂದ ಕೂಡಲೇ ಉಪೇಂದ್ರ ಮತ್ತೆ ಶೂಟಿಂಗ್ ಮುಂದುವರೆಸಿದ್ದಾರೆ. ವಿಡಿಯೋದಲ್ಲಿ ಸಹ ಉಪೇಂದ್ರ ಆರೋಗ್ಯವಾಗಿ, ಗೆಲುವಾಗಿ ತಮ್ಮ ಎಂದಿನ ಲಯದಲ್ಲಿರುವಂತೆ ಕಾಣಿಸಿಕೊಂಡಿದ್ದಾರೆ.
ಉಪೇಂದ್ರ ಅವರು ತಮ್ಮದೇ ನಿರ್ದೇಶನದ ‘ಯುಐ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಸಿನಿಮಾದ ಫೈಟ್ ದೃಶ್ಯಗಳ ಚಿತ್ರೀಕರಣ ನಡೆಯುವ ವೇಳೆ ಬಳಸಿದ ಧೂಳಿನಿಂದಾಗಿ ಉಪೇಂದ್ರ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅವರನ್ನು ಸಮೀಪದ ಹರ್ಷಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
