ಭಗವಾನ್ ನರಸಿಂಗ್ ಶೋಭಾ ಯಾತ್ರೆಗೆ ಯೋಗಿ ಆದಿತ್ಯನಾಥ್ ಚಾಲನೆ

ಕೊರೊನಾ ವೈರಸ್ ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳಿಂದ ಗೋರಖ್ಪುರದಲ್ಲಿ ನಿಂತಿದ್ದ ಸಾಂಪ್ರದಾಯಿಕ ಭಗವಾನ್ ನರಸಿಂಗ್ ಶೋಭಾ ಯಾತ್ರೆ ಇಂದು ಅದ್ಧೂರಿಯಾಗಿ ನಡೆಸಲು ಸಕಲ ಸಿದ್ದತೆ ನಡೆಸಲಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಘಂಟಾ ಘರ್ ನಲ್ಲಿ ನಡೆಯುತ್ತಿರುವ ಸಾಂಪ್ರದಾಯಿಕ ಭಗವಾನ್ ನರಸಿಂಗ್ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗೋರಕ್ಷಪೀಠಾಧೀಶ್ವರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಶೋಭಾ ಯಾತ್ರೆಯು ಘಂಟಾಘರ್ನಿಂದ ಹೊರಡಲಿದೆ.
ಮೆರವಣಿಗೆಯ ಸಂದರ್ಭದಲ್ಲಿ ಗೋರಖ್ಪುರದ ಜನರು ಯೋಗಿ ಅವರೊಂದಿಗೆ ಹೋಳಿ ಆಡಲಿದ್ದಾರೆ. ಹೀಗಾಗಿ ಮೆರವಣಿಗೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಗೋರಖ್ ಪುರದಲ್ಲಿ ಯಾವುದೇ ಮೆರವಣಿಗೆ ಆಯೋಜಿಸಲಾಗಿಲ್ಲ. ಹೀಗಾಗಿ ಈ ಬಾರಿ ಅದ್ದೂರಿಯಾಗಿ ಭಗವಾನ್ ನರಸಿಂಗ್ ಶೋಭಾ ಯಾತ್ರೆ ಆಯೋಜಿಸಲು ಸಕಲ ಸಿದ್ದತೆ ನಡೆದಿದೆ.
ಯೋಗಿ ಆದಿತ್ಯನಾಥ್ ಈಗಾಗಲೇ ಗೋರಖ್ಪುರದಲ್ಲಿ ಮೂರು ದಿನಗಳ ಪ್ರವಾಸದಲ್ಲಿದ್ದಾರೆ. ಪ್ರವಾಸದ ಮೂರನೇ ದಿನವಾದ ಇಂದು ಘಂಟಾಘರ್ ನಿಂದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ನರಸಿಂಗ್ ಶೋಭಾಯಾತ್ರೆ ಹೊರಡಲಿದೆ. ಮೆರವಣಿಗೆಗೂ ಮುನ್ನ ಗೋರಕ್ಷಪೀಠದಲ್ಲಿನ ಹೋಳಿಕಾಗೆ ತಿಲಕವಿಡುವ ಮೂಲಕ ಸಿಎಂ ಯೋಗಿ ಅವರು ಹೋಳಿಗೆ ಚಾಲನೆ ನೀಡಲಿದ್ದಾರೆ. ನಂತರ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹೋಳಿಕೋತ್ಸವ ಸಮಿತಿ ಮಹಾನಗರದಿಂದ ಆಯೋಜಿಸಿರುವ ಈ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಧ್ವಜವಂದನೆ ಮತ್ತು ಪ್ರಾರ್ಥನೆ ನಡೆಯಲಿದೆ.
