ತಲಕಾವೇರಿ: ಭಕ್ತರಿಗೆ ತೀರ್ಥ ರೂಪದಲ್ಲಿ ದರ್ಶನ ನೀಡಿದ ತಾಯಿ ಕಾವೇರಿ

ಮಡಿಕೇರಿ : ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಇಂದು ತೀರ್ಥೋದ್ಭವ ನಡೆಯಿತು. ಕಾವೇರಿ ಮಾತೆ ತೀರ್ಥದ ರೂಪದಲ್ಲಿ ತನ್ನ ಅಸಂಖ್ಯಾತ ಭಕ್ತರಿಗೆ ದರ್ಶನ ನೀಡಿದಳು. ಬ್ರಹ್ಮಗಿರಿಯ ತಲಕಾವೇರಿ ಕ್ಷೇತ್ರದ ಪವಿತ್ರ ಬ್ರಹ್ಮಕುಂಡಿಕೆಯಿಂದ ಮಧ್ಯಾಹ್ನ 1.11ಕ್ಕೆ ಕಾವೇರಿಯು ತೀರ್ಥರೂಪಿಣಿಯಾಗಿ ಹರಿದು ಭಕ್ತರಿಗೆ ದರ್ಶನ ಭಾಗ್ಯ ನೀಡಿದಳು.
ಕಾವೇರಿ ದೇವಿಗೆ ವಿಶೇಷ ಪೂಜೆ ನೆರವೇರುತ್ತಿದ್ದಂತೆ ಪವಿತ್ರ ತೀರ್ಥೋದ್ಭವ ನಡೆಯಿತು. ನೆರೆದ ಸಾವಿರಾರು ಭಕ್ತರ ಕಂಠದಲ್ಲಿ ಜೈ ಜೈ ಮಾತಾ ಕಾವೇರಿ ಮಾತಾ, ಕಾವೇರಿ ಮಾತಾಕೀ ಜೈ ಎನ್ನುವ ಘೋಷಣೆಗಳು ಮೊಳಗಿದವು.
ಹಗಲಿನ ವೇಳೆ ತೀರ್ಥೋದ್ಭವ ನಡೆದ ಕಾರಣ ಕಾವೇರಿ ತೀರ್ಥೋದ್ಭವ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ತೀರ್ಥೋದ್ಭವದ ಬಳಿಕ ಭಕ್ತರು ತಂದಿದ್ದ ಪಾತ್ರೆಗಳಲ್ಲಿ ತೀರ್ಥವನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ದರು. ಈ ವರ್ಷ ಭಕ್ತರಿಗೆ ತೀರ್ಥೋದ್ಭವದ ದರ್ಶನಕ್ಕೆ ಜಿಲ್ಲಾಡಳಿತವು ಅವಕಾಶ ನೀಡಿತ್ತು.ಆದರೆ ತೀರ್ಥ ಸ್ನಾನಕ್ಕೆ ಅವಕಾಶ ಇರಲಿಲ್ಲ.
ಸಚಿವ ನಾರಾಯಣಗೌಡ, ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಸಂಸದ ಪ್ರತಾಪ ಸಿಂಹ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಮೊದಲಾದವರು ಹಾಜರಿದ್ದರು.
