ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗಲ್ಲ ಎಂದ ವಿದ್ಯಾರ್ಥಿನಿಯರು

ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಹೈಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ. ಶಾಲಾ ಕಾಲೇಜಿನ ಒಳಗೆ ಸಮವಸ್ತ್ರ ಬಿಟ್ಟು ಬೇರೆ ಯಾವುದೇ ವಸ್ತ್ರಗಳಿಗೆ ಅವಕಾಶ ಇಲ್ಲ ಎಂದು ತೀರ್ಪು ಪ್ರಕಟವಾದ ಬೆನ್ನಲ್ಲೆ ಇದೀಗ ಆರು ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗಲ್ಲ ಎಂದಿದ್ದಾರೆ.
ಹಿಜಾಬ್ ವಿವಾದ ಆರಂಭಿಸಿದ ಉಡುಪಿ ಕಾಲೇಜಿನ ಆರು ವಿದ್ಯಾರ್ಥಿನಿಯರು ಕೋರ್ಟ್ ತೀರ್ಪಿಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಟಿ ನಡೆಸಿದ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದು ನಮ್ಮ ಧಾರ್ಮಿಕ ಹಕ್ಕು, ಕುರಾನ್ ಹೇಳಿದಂತೆ ನಾವು ನಡೆಯುತ್ತೇವೆ ಎಂದಿದ್ದಾರೆ.
ಹೈಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಗುವ ನಂಬಿಕೆ ಇತ್ತು. ಆದರೆ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿಲ್ಲ. ನಾವು ನ್ಯಾಯ ಸಿಗುವವರೆಗೂ ಕಾಲೇಜಿಗೆ ಹಿಜಾಬ್ ಇಲ್ಲದೆ ಹೋಗಲ್ಲ. ಕುರಾನ್ ನಲ್ಲಿ ಹೇಳಿರುವುದರಿಂದ ನಾವು ಹಿಜಾಬ್ ಗಾಗಿ ಶಿಕ್ಷಣವನ್ನ ತ್ಯಾಗ ಮಾಡುತ್ತಿದ್ದೇವೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. “ರಾಜಕೀಯ ಲಾಭಕ್ಕೆ ಈ ವಿಚಾರವನ್ನು ಕಮ್ಯೂನಲ್ ಮಾಡಲಾಗಿದೆ. ರಾಜಕೀಯ ದುರುದ್ದೇಶದಿಂದ ಚಿಕ್ಕ ವಿಷಯವನ್ನ ದೊಡ್ಡ ವಿಷಯ ಮಾಡಿದ್ದಾರೆ. ಇದರಿಂದ ಎಲ್ಲರ ಶಿಕ್ಷಣಕ್ಕೆ ಬಹಳ ಸಮಸ್ಯೆ ಆಗಿದೆ. ಪ್ರಾಂಶುಪಾಲರು ಹಿಜಾಬ್ ಅವಕಾಶ ಕೊಟ್ಟಿದ್ದರೆ ಈ ಸಮಸ್ಯೆಗಳನ್ನು ಆಗುತ್ತಿರಲಿಲ್ಲ. ಇದು ಹಿಜಾಬ್ಗೆ ತಡೆ ಅಲ್ಲ. ಇದು ನಮ್ಮ ಶಿಕ್ಷಣದ ತಡೆ. ನಮಗೆ ಧರ್ಮ ಮತ್ತು ಶಿಕ್ಷಣ ಬಹಳ ಮುಖ್ಯ. ನಮಗೆ ಎರಡೂ ಅವಕಾಶ ಬೇಕು. ಇಂದು ಅಂಬೇಡ್ಕರ್ ಬದುಕಿದ್ದರೆ ಇಂದಿನ ಸ್ಥಿತಿ ನೋಡಿ ಕಣ್ಣೀರು ಹಾಕುತ್ತಿದ್ದರು ಎಂದಿದ್ದಾರೆ.
