ಎಸ್ ಆರ್ ಹಿರೇಮಠ್ ನೇತೃತ್ವದಲ್ಲಿ ಜನಜಾಗೃತಿ ಜಾಥಾ: ಸರ್ಕಾರದ ವಿರುದ್ಧ ರಣಕಹಳೆ

ನವಲಗುಂದ: ರೈತರಿಗೆ ಮರಣ ಶಾಸನವಾಗಿದ್ದ ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಹೀಗಾಗಿ ರಾಜ್ಯ ಸರ್ಕಾರ ಕಾಯ್ದೆಗಳನ್ನ ಹಿಂಪಡೆಯುವಂತೆ ಅಗ್ರಹಿಸಿ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್ ಹಿರೇಮಠ್ ಅವರ ನೇತೃತ್ವದಲ್ಲಿ ಬಸವಕಲ್ಯಾಣದಿಂದ ಬೆಂಗಳೂರಿಗೆ ಹೊರಟಿರುವ ಜನಜಾಗೃತಿ ಜಾಥಾವು ಮಂಗಳವಾರದಂದು ನವಲಗುಂದ ತಲುಪಿತ್ತು. ನವಲಗುಂದ ಮಹಾದಾಯಿ ಹೋರಾಟಗಾರರು ಜನಜಾಗೃತಿ ಜಾಥಾವನ್ನು ಸ್ವಾಗತಿಸಿಕೊಂಡರುತಾಲೂಕಿನ ರೈತ ಭವನದಲ್ಲಿ ಜನಜಾಗೃತಿ ಜಾಥಾವನ್ನು ಸ್ವಾಗತಿಸಿದ ಮಹಾದಾಯಿ ಹೋರಾಟಗಾರರು ರೈತರ ಪರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್ ಹಿರೇಮಠ್ ನೇತೃತ್ವದಲ್ಲಿ ನಡೆಯುತ್ತಿರುವ ಬಸವಕಲ್ಯಾಣದಿಂದ ಬೆಂಗಳೂರು ಜನಜಾಗೃತಿ ಜಾಥಾಕ್ಕೆ ಬೆಂಬಲ ಘೋಷಣೆ ಮಾಡಿದರು. ಇದೇ ವೇಳೆ ರಾಜ್ಯ ಸರ್ಕಾರ ಕೂಡಲೇ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿದರು.
ಈ ವೇಳೆ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್ ಹಿರೇಮಠ್ ಮಾತನಾಡಿ, ರೈತರಿಗೆ ಮರಣ ಶಾಸನವಾಗಿದ್ದ ಕರಾಳ ಕೃಷಿ ಕಾಯ್ದೆಗಳನ್ನು ಈಗಾಗಲೇ ಕೇಂದ್ರ ಸರಕಾರ ರದ್ಧುಗೊಳಿಸಿದೆ. ಆದರೆ, ರಾಜ್ಯ ಸರಕಾರ ಮಾತ್ರ ಈ ಕರಾಳ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ರೈತ ಕುಲಕ್ಕೆ ಸವಾಲು ಹಾಕಿದೆ. ಈ ಸವಾಲನ್ನು ಎದುರಿಸಲು ನಾವು ಸಜ್ಜಾಗಿದ್ದು, ಈ ಕಾಯ್ದೆ ರದ್ದುಗೊಳ್ಳುವರೆಗೆ ಹೋರಾಟ ನಡೆಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ದಲಿತಪರ ಹೋರಾಟಗಾರ ಲಕ್ಷ್ಮಣ ಬಕ್ಕಾಯಿ, ಮಹಾದಾಯಿ ಹೋರಾಟಗಾರರಾದ ಸುಭಾಷ್ ಚಂದ್ರಗೌಡ ಪಾಟೀಲ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
