ಆಸ್ತಿಯ ಆಸೆಗೆ ಅತ್ತೆ ಕೊಂದಿದ್ದ ಅಳಿಯನಿಗೆ ಜೀವಾವಧಿ ಶಿಕ್ಷೆ

ದಾವಣಗೆರೆ: ಆಸ್ತಿಯ ವಿಚಾರವಾಗಿ ತಾಯಿಯ ತಮ್ಮನ ಹೆಂಡತಿಯನ್ನು ಹತ್ಯೆ ಮಾಡಿದ್ದ ಅಳಿಯನಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಭಿರಾಜ್ ಶಿಕ್ಷೆಗೆ ಒಳಗಾದ ಆರೋಪಿ. ಈತ ನಗರದ ಹೊಂಡ ಸರ್ಕಲ್ ಬಳಿಯ ನಿವಾಸಿ. ಈತನ ಅತ್ತೆ ಭಾಗ್ಯಮ್ಮ ಹತ್ಯೆಗೀಡಾಗಿದ್ದ ಮಹಿಳೆ.
ಘಟನೆ ಹಿನ್ನೆಲೆ ಏನು ಎನ್ನುವುದನ್ನು ನೋಡುವುದಾದರೆ, ಕಳೆದ 14 ವರ್ಷಗಳ ಹಿಂದೆ ದಾವಣಗೆರೆಯ ಶಿವಕುಮಾರ್ ಎಂಬಾತ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದದ ಹನುಮಂತಪ್ಪ ಅವರ ಪುತ್ರಿ ಭಾಗ್ಯಮ್ಮ ಅವರನ್ನು ಮದುವೆ ಆಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗು ಹುಟ್ಟಿತ್ತು. ಕುಡಿತದ ಚಟ ಹೊಂದಿದ್ದ ಶಿವಕುಮಾರ್ ಅವರು ಕಳೆದ ಐದು ವರ್ಷಗಳ ಹಿಂದೆ ಸಾವು ಕಂಡಿದ್ದರು. ಆ ಬಳಿಕ ಭಾಗ್ಯಮ್ಮ ಮಗಳನ್ನು ಅಕ್ಕನ ಮನೆಯಲ್ಲಿ ಬಿಟ್ಟು, ಗಂಡನ ಸ್ವಂತ ಮನೆಯಲ್ಲಿ ಒಬ್ಬರೇ ವಾಸ ಮಾಡ್ತಿದ್ದರು.
ಭಾಗ್ಯಮ್ಮರ ಮನೆಯಿದ್ದ ಹಿಂದಿನ ಮನೆಯಲ್ಲಿ ಅಭಿರಾಜ್ ವಾಸವಾಗಿದ್ದ. ಈ ಶಿವಕುಮಾರ್ ಪುತ್ರ. ಭಾಗ್ಯಮ್ಮ ವಾಸವಿರುವ ಮನೆಯನ್ನು ಹೇಗಾದರೂ ಮಾಡಿ ಕಬಳಿಸಬೇಕೆಂಬ ದುರಾಸೆ ಹೊಂದಿದ್ದ. ಈ ನಿಟ್ಟಿನಲ್ಲಿ ಭಾಗ್ಯಮ್ಮರಿಗೆ ಕಿರುಕುಳ ಕೊಡುತ್ತಿದ್ದ. ಮಾತ್ರವಲ್ಲ, ಭಾಗ್ಯಮ್ಮರ ಮನೆಗೆ ಬೇರೆ ಬೇರೆ ಪುರುಷರು ಬಂದು ಹೋಗುತ್ತಿದ್ದಾರೆ ಎಂದು ಆಕೆಯ ತಾಯಿ ಹಾಗೂ ಅಣ್ಣನಿಗೆ ಚಾಡಿ ಹೇಳುತ್ತಿದ್ದ. 2019ರ ಜುಲೈ 18ರಂದು ಅಭಿರಾಜ್ ಮನೆಗೆ ಬಂದಾಗ ತನ್ನ ಬಗ್ಗೆ ಚಾಡಿ ಹೇಳುತ್ತಿರುವ ಬಗ್ಗೆ ಭಾಗ್ಯಮ್ಮ ಅಭಿರಾಜ್ನನ್ನು ಪ್ರಶ್ನಿಸಿದ್ದಾರೆ.
ಇದರಿಂದ ಕೋಪಗೊಂಡ ಅಭಿರಾಜ್, ಈಕೆಯನ್ನು ಹೀಗೆಯೆ ಬಿಟ್ಟರೆ ತನಗೆ ಆಸ್ತಿ ಸಿಗುವುದಿಲ್ಲ ಎಂದುಕೊಂಡು ಭಾಗ್ಯಮ್ಮಳನ್ನು ಮಚ್ಚಿನಿಂದ ಕೊಚ್ಚಿ ಕೊಂದು ಹಾಕಿದ್ದ. ಅಂದಿನ ಸಿಪಿಐ ಉಮೇಶ್ ಅವರು ಪ್ರಕರಣ ಸಂಬಂಧ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೆ. ವಿ. ವಿಜಯಾನಂದ ಅವರು, ಆರೋಪಿಯ ಆರೋಪ ಸಾಬೀತಾಗಿದ್ದರಿಂದ ಶಿಕ್ಷೆಯನ್ನು ಪ್ರಕಟಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ. ಕೆಂಚಪ್ಪ ವಾದ ಮಂಡಿಸಿದ್ದರು.
