
ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಕಾರ್ಯಾಚರಣೆಯನ್ನು ಭಾರತ ತೀವ್ರಗೊಳಿಸಿದೆ. ಈ ಉದ್ದೇಶಕ್ಕಾಗಿ ಮುಂದಿನ 3 ದಿನಗಳಲ್ಲಿ 26 ವಿಮಾನಗಳನ್ನು ನಿಗದಿಪಡಿಸಲಾಗಿದೆ. ಉಕ್ರೇನ್ ನ 2ನೇ ಅತಿದೊಡ್ಡ ನಗರವಾದ ಖಾರ್ಕಿವ್ ನಿಂದ ಭಾರತಿಯರನ್ನು ಸ್ಥಳಾಂತರಿಸುವುದು ಸರ್ಕಾರದ ಪ್ರಮುಖ ಆದ್ಯತೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ತಿಳಿಸಿದ್ಧಾರೆ.
ಮುಂದಿನ 3 ದಿನಗಳಲ್ಲಿ ಸ್ವದೇಶಿ ಪ್ರಜೆಗಳನ್ನು ಕರೆತರಲು 26 ವಿಮಾನಗಳು
ಸುಮಾರು 12 ಸಾವಿರ ಭಾರತೀಯರು ಈಗಾಗಲೇ ಉಕ್ರೇನ್ ತೊರೆದಿದ್ದಾರೆ. ಇನ್ನು ಸುಮಾರು ಪ್ರತಿಶತ 60ರಷ್ಟು ಮಂದಿ ಯುದ್ಧಪೀಡಿತ ರಾಷ್ಟ್ರದಲ್ಲೇ ಉಳಿದುಕೊಂಡಿದ್ದಾರೆ. ಉಕ್ರೇನಿಯನ್ ವಾಯು ಪ್ರದೇಶ ಮುಚ್ಚಿದ ನಂತರ, ಭಾರತ, ನೆರೆಯ ದೇಶಗಳಾದ ರೊಮೇನಿಯಾ, ಹಂಗೇರಿ, ಪೋಲೆಂಡ್ ಮತ್ತು ಸ್ಲೋವಾಕಿಯದೊಂದಿಗೆ ಭೂಗಡಿ ದಾಟುವ ಮೂಲಕ ಉಕ್ರೇನ್ ನಿಂದ ನಾಗರಿಕರನ್ನು ಸ್ಥಳಾಂತರಿಸುತ್ತಿದೆ.
ಕೇಂದ್ರದ ನಾಲ್ವರು ಸಚಿವರಾದ ಹರ್ದೀಪ್ ಸಿಂಗ್ ಪುರಿ, ಕಿರಣ್ ರಿಜಿಜು, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಜನರಲ್ ವಿ.ಕೆ.ಸಿಂಗ್ ಅವರನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಈ ದೇಶಗಳಲ್ಲಿ ನಿಯೋಜಿಸಲಾಗಿದೆ. ಉಕ್ರೇನ್ ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಆಪರೇಷನ್ ಗಂಗಾದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿ ಭಾರತೀಯ ವಾಯಪಡೆಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಭಾರತೀಯ ವಾಯುಪಡೆಯ ಸಿ.17 ಬೋಯಿಂಗ್ ವಿಮಾನಗಳು ರೋಮೇನಿಯಾದತ್ತ ತೆರಳಿವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ವಿಮಾನಗಳನ್ನು ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಕಾರ್ಯಕ್ಕೆ ನಿಯೋಜಿಸುವ ಸಾಧ್ಯತೆ ಇದೆ.
