
ನವದೆಹಲಿ: ಉಕ್ರೇನ್ ನಲ್ಲಿರುವ ಭಾರತೀಯರಿಗೆ ಸ್ಥಳಾಂತರಿಸುವ ವಿಮಾನಗಳನ್ನು ಸರ್ಕಾರ ಆಯೋಜಿಸುತ್ತಿದೆ. ಇದಕ್ಕಾಗಿ ತಗುಲುವ ವೆಚ್ಚವನ್ನು ಸಂಪೂರ್ಣ ಸರ್ಕಾರವೇ ಭರಿಸಲಿದೆ ಎಂದು ತಿಳಿದುಬಂದಿದೆ. ಈ ನಡುವೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಶಿಬಿರ ಕಚೇರಿಗಳು ಈ ಪಶ್ಚಿಮ ಉಕ್ರೇನ್ ನ ಎಲ್ವಿನ್ ಮತ್ತು ಚೆರ್ನಿವ್ಟ್ಸ್ ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಶಿಬಿರ ಕಚೇರಿಗಳಿಗೆ ಹೆಚ್ಚುವರಿಯಾಗಿ ರಷ್ಯನ್ ಮಾತನಾಡುವ ಅಧಿಕಾರಿಗಳನ್ನು ಕಳುಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳು ಅಲ್ಲಿ, ಈ ನಗರಗಳಿಗೆ ತಲುಪುವ ಭಾರತೀಯ ನಾಗರಿಕರಿಗೆ ಸಹಾಯ ಮಾಡುತ್ತಿದ್ದಾರೆ ಮತ್ತು ನೆರೆಯ ಗಡಿ ದಾಟುವಿಕೆಗಳ ಮೂಲಕ ಉಕ್ರೇನ್ ನಿಂದ ನಿರ್ಗಮಿಸಲು ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ತಿಳಿದಿದೆ. ಮೊದಲ ಬ್ಯಾಚ್ ನ ಭಾರತೀಯ ವಿದ್ಯಾರ್ಥಿಗಳು ಈಗ ಚೆರ್ನಿವ್ಟ್ಸಿನಿಂದ ಉಕ್ರೇನ್ ಮತ್ತು ರುಮೇನಿಯಾದ ಗಡಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಕ್ರೇನ್ ವಾಯು ಪ್ರದೇಶವನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಪರ್ಯಾಯ ವ್ಯವಸ್ಥೆ ಮಾಢಲಾಗುತ್ತಿದೆ. ಉಕ್ರೇನ್ ನಿಂದ ಭಾರತೀಯರು ನಿರ್ಗಮಿಸಲು ಅನುಕೂಲವಾಗುವಂತೆ ಸಂಘಟಿಸಲು ಮತ್ತು ನೆರವು ನೀಡಲು ಹಂಗೇರಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ತಂಡವನ್ನು ಗಡಿ ಪೋಸ್ಟ್ ಝಾಹನಿಗಗೆ ಕಳುಹಿಸಲಾಗಿದೆ.
ಭಾರತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸ್ಥಳಾಂತರಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ. ವಿದೇಶಾಂಗ ಸಚಿವಾಲಯದ ತಂಡಗಳನ್ನು ಪೋಲೆಂಡ್, ಸ್ಲೋವಾಕ್ ರಿಪಬ್ಲಿಕ್ ಮತ್ತು ರುಮೇನಿಯಾದಲ್ಲಿ ಉಕ್ರೇನ್ ನೊಂದಿಗೆ ಭೂಗಡಿಗಳಿಗೆ ಕಳುಹಿಸಲಾಗುತ್ತಿದೆ. ಪೋಲೆಂಡ್ ತಂಡವು ಉಕ್ರೇನ್ ನೊಂದಿಗಿನ ಕ್ರಾಕೋವಿಕ್ ಭೂ ಗಡಿಯತ್ತ ಸಾಗಿದೆ. ಸ್ಲೋವಾಕ್ ಗಣರಾಜ್ಯದ ತಂಡವು ವೈಸ್ನೆ ನೆಮೆಕೆ ಭೂ ಗಡಿಯತ್ತ ಸಾಗಿದೆ ಮತ್ತು ರುಮೇನಿಯಾದ ತಂಡವು ಸುಸೇವಾಗೆ ತೆರಳಿದೆ.
ಈ ಗಡಿ ಬಿಂದುಗಳ ಬಳಿ ಉಕ್ರೇನ್ ನಲ್ಲಿರುವ ಭಾರತೀಯ ಪ್ರಜೆಗಳು ಉಕ್ರೇನ್ ನಿಂದ ನಿರ್ಗಮಿಸಲು ಬಯಸಿದರೆ ಈ ತಂಡಗಳನ್ನು ಸಂಪರ್ಕಿಸಲು ಸಚಿವಾಲಯ ಸಲಹೆ ನೀಡಿದೆ. ಸಂಪರ್ಕ ಸಂಖ್ಯೆಗಳು ಸಚಿವಾಲಯದ ವೆಬ್ ಸೈಟ್ ನಲ್ಲಿ ಲಭ್ಯವಿದೆ.
ರಷ್ಯಾ ತನ್ನ ನೆರೆಯ ರಾಷ್ಟ್ರದ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಿದ ಬಳಿಕ ಉಕ್ರೇನ್ ನಲ್ಲಿ ಸುಮಾರು 20 ಸಾವಿರ ಭಾರತೀಯರು ಸಿಲುಕಿಕೊಂಡಿದ್ದಾರೆ.
