ಕೋಮುಗಲಭೆ ಹಿಂದೆ ಕಾಂಗ್ರೆಸ್ ಕೈ: ದಿಂಗಾಲೇಶ್ವರ ಸ್ವಾಮಿಗೆ ಫುಲ್ ಕ್ಲಾಸ್!

ದಾವಣಗೆರೆ: ರಾಜ್ಯದಲ್ಲಿ ಎಲ್ಲಿಯೇ ಕೋಮು ಗಲಭೆಗಳಾದ್ರೆ ಇದರ ಹಿಂದೆ ನೇರ ಕಾಂಗ್ರೆಸ್ ಕೈವಾಡ ಇರುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಹಿಂದೆ ಕಾವೇರಿ ಗಲಾಟೆ ವೇಳೆ ರಾಮನಗರದ ಚನ್ನಪಟ್ಟಣದಲ್ಲಿ ಗಲಾಟೆ ಮಾಡಿಸಿದವರು ಕಾಂಗ್ರೆಸ್ ನವರು. ಅಲ್ಪ ಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಹುಬ್ಬಳ್ಳಿ, ಡಿ. ಜೆ. ಹಳ್ಳಿ, ಕೆ. ಜೆ. ಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದು ಸ್ಪಷ್ಟವಾಗಿದೆ. ಕೋಮುಗಲಭೆಯಲ್ಲಿ ಅಲ್ತಾಫ್ ಹಳ್ಳೂರ ಪ್ರಮುಖ ಆರೋಪಿ. ಇವರನ್ನೇ ವೇದಿಕೆ ಮೇಲೆ ಕೂರಿಸಿಕೊಳ್ಳುತ್ತಾರೆ. ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಲ್ಲವೋ ಎಂಬುದನ್ನ ಸ್ಪಷ್ಟಪಡಿಸಲಿ. ಬೇಕಿದ್ದರೇ ನಾವು ಅದನ್ನ ಸಾಬೀತು ಪಡಿಸುತ್ತೇವೆ. ಇದು ರಾಜ್ಯದಲ್ಲಿ ಬಿಜೆಪಿಗೆ ಕೆಟ್ಟ ಹೆಸರು ತರುವ ಹುನ್ನಾರ ಎಂದು ಟೀಕಾಪ್ರಹಾರ ನಡೆಸಿದರು.
ದಿಂಗಾಲೇಶ್ವರ ಸ್ವಾಮೀಜಿಗೆ ಕ್ಲಾಸ್ ತೆಗೆದುಕೊಂಡ ಆರ್. ಅಶೋಕ್ ಸ್ವಾಮೀಜಿಯಾಗಿ ಯಾವುದೋ ಒಂದು ಪಕ್ಷದ ಏಜೆಂಟ್ ರೀತಿಯಲ್ಲಿ ಮಾತಾಡುವುದು ಸರಿಯಲ್ಲ. ಈಗ ನಾವು ಕಾಗಿನೆಲೆ, ಪೇಜಾವರ ಮಠಕ್ಕೆ ಸರ್ಕಾರದಿಂದ ಅನುದಾನ ನೀಡಲಾಗಿದೆ. ಯಾರಿಗೂ ಇಲ್ಲದ ಕಮಿಷನ್ ಕಾಟ ಇವರೊಬ್ಬರಿಗೆ ಮಾತ್ರ ಏಕೆ? ಕನಿಷ್ಟ ಯಾರಿಗೆ ಕೊಟ್ಟಿದ್ದೀರಾ ಎಂಬುದನ್ನಾದ್ರು ಹೇಳಿ. ಈ ರೀತಿ ಸ್ವಾಮೀಜಿಗಳು ರಾಜಕೀಯ ಭಾಷಣ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
