ಮೈಸೂರು ಜಿಲ್ಲೆಯ ವಿವಿಧೆಡೆ ಮಳೆ ತಂದ ಆವಾಂತರ

ಮೈಸೂರು: ಬಿಸಿಲಿನ ತಾಪದಿಂದ ಬೇಸತ್ತಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗಿದೆ. ಹುಣಸೂರು ತಾಲೂಕಿನಲ್ಲಿ ಮಳೆಯಿಂದ ಅಪಾರ ಬೆಳೆ ಹಾನಿ, ನಾಶವಾಗಿದ್ದು ಕೊಡಗು- ಹುಣಸೂರು ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ಬಿರುಗಾಳಿ ಮಳೆಗೆ ಬಾಳೆ ಬೆಳೆ ನಾಶವಾಗಿದ್ದು ಮಾತ್ರವಲ್ಲದೆ, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಚಿಕ್ಕ ಹುಣಸೂರಿನಲ್ಲಿ 5 ಎಕರೆಯಲ್ಲಿದ್ದ ಬಾಳೆ ಬೆಳೆ ಹಾನಿಯಾಗಿದೆ. ಗೌಡಗೆರೆಯಲ್ಲಿ 5 ಕಂಬ, ಕಿರಿಜಾಜಿಯಲ್ಲಿ 4 ವಿದ್ಯುತ್ ಕಂಬ, ದೊಡ್ಡ ಹೆಜ್ಜೂರಿನಲ್ಲಿ 2 ಕಂಬ, ಚಿಲ್ಕುಂದದಲ್ಲಿ 1 ಕಂಬ ಧರೆಗೆ ಉರುಳಿ ಬಿದ್ದಿದೆ.
ಕಟ್ಟೆಮಳಲವಾಡಿ ಗ್ರಾಮದಲ್ಲಿ ಮರ ಬಿದ್ದು ದ್ವಿಚಕ್ರವಾಹನ ಜಖಂ ಆಗಿದೆ. ಅಕಾಲಿಕ ಮಳೆಯಿಂದ ಮಾವು, ತಂಬಾಕು, ಅಡಿಕೆ ಬೆಳೆ ನಾಶವಾಗಿದೆ. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ರೈತರ ಒತ್ತಾಯ ಕೇಳಿಬಂದಿದೆ. ರಸ್ತೆಗಳಲ್ಲಿ ಮರ ಬಿದ್ದು ಸಂಚಾರ ಸ್ಥಗಿತಗೊಂಡಿದೆ. ಕಟ್ಟೆಮಳಲವಾಡಿಯಲ್ಲಿ ಮನೆಯ ಮೇಲೆ ಮರ ಬಿದ್ದು ಮೇಲ್ಚಾವಣಿಗೆ ಹಾನಿ ಉಂಟಾಗಿದೆ. ಚಿಕ್ಕ ಹುಣಸೂರಿನ ಮರಿಯಮ್ಮ ಬೆಳೆದಿದ್ದ 5 ಎಕರೆ ನೇಂದ್ರ ಬಾಳೆ ಮಳೆಯಿಂದ ಹಾನಿಯಾಗಿದೆ. ಸುಮಾರು 8 ಲಕ್ಷ ನಷ್ಟವಾಗಿದ್ದು ರೈತ ಮಹಿಳೆ ಕಣ್ಣೀರು ಹಾಕಿದ್ದಾರೆ. ಒಟ್ಟಿನಲ್ಲಿ ಮೈಸೂರು ಜಿಲ್ಲೆಯ ವಿವಿಧಡೆ ಮಳೆಯ ಅಬ್ಬರಕ್ಕೆ ಸಾಕಷ್ಟು ಹಾನಿಯುಂಟಾಗಿದೆ.
