ಪಿಎಸ್ಐ ನೇಮಕಾತಿ ಅಕ್ರಮ: ದಿವ್ಯಾ ಹಾಗರಗಿ ಸೇರಿ ಹಲವರಿಗೆ ಬಂಧನದ ಭೀತಿ!

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಜ್ಞಾನ ಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಅಜ್ಞಾತ ಸ್ಥಳದಿಂದಲೇ ನೀರಿಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸಿಐಡಿ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸುತ್ತಿದ್ದಂತೆ ತಲೆ ಮರೆಸಿಕೊಂಡಿರುವ ದಿವ್ಯಾ ಹಾಗರಗಿ ಒಂದು ವಾರವಾದ್ರೂ ವಿಚಾರಣೆಗೆ ಹಾಜರಾಗಿಲ್ಲ, ಮನೆ ಮೇಲೆ ದಾಳಿ ಮಾಡಿ ದಿವ್ಯಾಳ ಪತಿ ರಾಜೇಶನನ್ನು ಬಂಧಿಸಿದ್ರೂ ಇಲ್ಲಿವರೆಗೆ ದಿವ್ಯಾ ಪತ್ತೆಯಾಗಿಲ್ಲ.
ಸದ್ಯ ಸಿಐಡಿ ಪೊಲೀಸರ ಬಂಧನದ ಭೀತಿಯಿಂದಾಗಿ ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ವಕೀಲರ ಮೂಲಕ ಕಲಬುರಗಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆಯಾಗಿದೆ.
ದಿವ್ಯಾ ಹಾಗರಗಿ ಅಲ್ಲದೆ ಶಾಲೆಯ ಮುಖ್ಯೋಪಾದ್ಯಾಯ ಕಾಶೀನಾಥ್, ಸಹ ಶಿಕ್ಷಕಿ ಅಶ್ವಿನಿ ಕೂಡಾ ಸಿಐಡಿ ಕೈಗೆ ಸಿಗದೆ ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇವರಷ್ಟೇ ಅಲ್ಲ, ಸಿಐಡಿಯಿಂದ ಈಗಾಗಲೇ ಬಂಧನಕ್ಕೊಳಗಾಗಿರುವ ಜ್ಞಾನ ಜ್ಯೋತಿ ಶಾಲೆಯ ಪರೀಕ್ಷಾ ಮೇಲ್ವಿಚಾರಕರೂ ಸಹ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
