ಪ್ರಾರ್ಥನಾ ಮಂದಿರದಲ್ಲಿ ಬಳಸುವ ಧ್ವನಿ ವರ್ಧಕಗಳಿಗೆ ನಮ್ಮ ವಿರೋಧವಿದೆ: ಪ್ರಮೋದ್ ಮುತಾಲಿಕ್

ಧಾರವಾಡ: ಮುಸ್ಲಿಂ ಪ್ರಾರ್ಥನಾ ಮಂದಿರಗಳ ಮೇಲಿರುವ ಧ್ವನಿ ವರ್ಧಕ ತೆರವು ಮಾಡಲು ಒತ್ತಾಯಿಸಿ, ತಾಲೂಕು ಆಡಳಿತ ಸೇರಿ ಶಬ್ದ ಮಾಲಿನ್ಯ ತಡೆಗೆ ನಾವು ಈ ಹಿಂದೆಯೇ ಮನವಿ ನೀಡಿದ್ದೇವೆ. ಆದರೆ ಅದಕ್ಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಅಧಿಕಾರಿಗಳ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಜೊತೆಗೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನಾವು ಮುಸ್ಲಿಂರ ಪ್ರಾರ್ಥನೆಗೆ ವಿರೋಧ ಮಾಡುತ್ತಿಲ್ಲ, ಅವರು ಬಳಸುವ ಧ್ವನಿ ವರ್ಧಕಕ್ಕೆ ನಮ್ಮ ವಿರೋಧವಿದೆ ಎಂದು ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಧ್ವನಿ ವರ್ಧಕ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತಾಲೂಕು ಆಡಳಿತ, ಶಬ್ದ ಮಾಲಿನ್ಯ ತಡೆಗೆ ಮನವಿ ಮಾಡಿ ಆಗಿದೆ. ಇವರಿಂದ ಯಾವುದೇ ಕೆಲಸವಾಗಿಲ್ಲ. ಹಾಗಾಗಿ ಈಗ ಕೊನೆಯದಾಗಿ ಜಿಲ್ಲಾಧಿಕಾರಿಗಳಿಗೆ ಮುಸ್ಲಿಂ ಪ್ರಾರ್ಥನಾ ಮಂದಿರ ಮೇಲಿರುವ ಧ್ವನಿ ವರ್ಧಕ ತೆರವು ಮಾಡಿಸಲು ಎಚ್ಚರಿಕೆಯೊಂದಿಗೆ ಮನವಿ ನೀಡಲು ತೀರ್ಮಾನ ಮಾಡಲಾಗಿದೆ. ಸದ್ಯದಲ್ಲಿಯೇ ಅದನ್ನು ನೀಡಲಾಗುವುದು ಎಂದರು.
