ಹಳೇ ಹುಬ್ಬಳ್ಳಿಯ ಕೋಮು ಗಲಭೆ ಪ್ರಕರಣ: ಪೊಲೀಸ್ ಇನ್ಸ್ಪೆಕ್ಟರ್ ಸೇರಿ ಸಿಬ್ಬಂದಿ, ಸಾರ್ವಜನಿಕರಿಗೆ ಗಾಯ

ಹುಬ್ಬಳ್ಳಿ: ಯುವಕನೊಬ್ಬ ಮುಸ್ಲಿಂರ ಪವಿತ್ರ ಧಾರ್ಮಿಕ ಸ್ಥಳವಾದ ಸೌದಿ ಅರೇಬಿಯಾದ ಮೆಕ್ಕಾದ ಮೇಲೆ ಕೇಸರಿ ಧ್ವಜ ಹಾರುವ ಕುರಿತಂತೆ ಮಾಡಿದ ಪೋಸ್ಟ್ನಿಂದ ಆಕ್ರೋಶಗೊಂಡಿದ್ದ ಮುಸ್ಲಿಂ ಸಮುದಾಯದವರು, ಕಳೆದ ದಿನ ತಡ ರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಎದುರು ಜಮಾಯಿಸಿಕೊಂಡು ಕಲ್ಲು ತೂರಾಟ ನಡೆಸಿದ್ದು, ಈ ಘಟನೆಯಲ್ಲಿ ಓರ್ವ ಇನ್ಸ್ಪೆಕ್ಟರ್ ಸೇರಿ ಸಾರ್ವಜನಿಕರಿಗೆ ಗಾಯಾಗಳಾಗಿರುವುದು ವರದಿಯಾಗಿದೆ.
ನಗರದ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಮುಖ್ಯ ರಸ್ತೆಯ ಉದ್ದಕ್ಕೂ ಪೊಲೀಸ್ ವಾಹನ ಸೇರಿದಂತೆ ಸಾರ್ವಜನಿಕರ ಅಂಗಡಿ ಮುಂಗಟ್ಟುಗಳ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನು ತಡೆಯಲು ಮುಂದಾದ ಪೊಲೀಸ್ ವಾಹನಗಳ ಮೇಲೆಯು ಸಾವಿರಕ್ಕೂ ಹೆಚ್ಚು ಜನ ಕಲ್ಲು ಇಟ್ಟಿಗೆ ಬಳಸಿ ದಾಳಿ ನಡೆಸಿದ್ದಾರೆ. ಇದರಿಂದಾಗಿ ಎರಡು ಪೊಲೀಸ್ ವಾಹನಗಳು ಜಖಂಗೊಂಡಿವೆ.
ಒಂದು ಪೊಲೀಸ್ ವಾಹನವನ್ನ ಪಲ್ಟಿ ಹೊಡಿಸಿ ಹಾನಿ ಮಾಡಿದ್ದಾರೆ. ಜೊತೆಗೆ ಹಳೇ ಹುಬ್ಬಳ್ಳಿಯ ಠಾಣೆಯ ಮುಂಭಾಗದ ರಸ್ತೆ ಸೇರಿದಂತೆ ಅಕ್ಕ ಪಕ್ಕದ ರಸ್ತೆ ಬದಿಯಲ್ಲಿದ ಅಂಗಡಿಗಳ ಮೇಲೂ ಕಲ್ಲು ತೂರಾಟ ನಡೆದಿದ್ದು, ಸಾರ್ವಜನಿಕರ ಆಸ್ತಿಗೂ ಹಾನಿಯುಂಟಾಗಿದೆ. ಉದ್ರಿಕ್ತರ ತಂಡ ಪೊಲೀಸ್ ವಾಹನದ ಹಿಂದೆ ತಂಡೋಪ ತಂಡವಾಗಿ ಹಿಂಬಾಲಿಸುತ್ತಾ ಕಲ್ಲು ಎಸೆಯುತ್ತಲೇ ಸಾಗಿದ್ದು, ಹಳೇ ಹುಬ್ಬಳ್ಳಿಯ ಠಾಣೆಯ ಮುಂಭಾಗದ ಮುಖ್ಯ ರಸ್ತೆಯಲ್ಲಿರುವ ಸಂಜೀವಿನಿ ಆಸ್ಪತ್ರೆಯ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ.
ಇದರಿಂದಾಗಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ರಾತ್ರಿಯಿಡಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜೊತೆಗೆ ಆಸ್ಪತ್ರೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ, ಗ್ಲಾಸ್ಗಳು ಪುಡಿ ಪುಡಿಯಾಗಿವೆ. ಏಕಾಏಕಿ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸ್ ಭದ್ರತೆಯಲ್ಲಿ ನಿಯೋಜನೆಗೊಂಡ ಓರ್ವ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿಗಳಿಗೂ ತಲೆ ಸೇರಿ ದೇಹದ ಬೇರೆ ಬೇರೆ ಭಾಗಕ್ಕೆ ಗಾಯವಾಗಿವೆ.
ಜೊತೆಗೆ ಸಾರ್ವಜನಿಕರ ಮೇಲೆಯೂ ಕಲ್ಲು ತೂರಾಟ ನಡೆಸಿರುವುದರಿಂದ ಹಲವು ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸುಮಾರು 5 ಕ್ಕೂ ಹೆಚ್ಚು ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ನಾಲ್ಕಕ್ಕೂ ಹೆಚ್ಚು ಸಾರ್ವಜನಿಕರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
