ತಮ್ಮ ಸರ್ಕಾರ ಯುವಜನರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದೆ : ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ನರೇಂದ್ರ ಮೋದಿ ಅವರು ಜನರ ನೈಜನಾಯಕ. ಸ್ವಚ್ಚಭಾರತ ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮವನ್ನು ಅವರು ಸೂಕ್ಷ್ಮಮಟ್ಟದಲ್ಲಿ ತಾವೇ ಆದರ್ಶವಾಗಿ ಅನುಷ್ಠಾನಗೊಳಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಬಿಜೆಪಿ ಯುವಮೋರ್ಚಾ ವತಿಯಿಂದ ವಿಧಾನಸೌಧ ಸಮೀಪದ ಡಾ ಬಿ.ಆರ್. ಅಂಬೇಡ್ಕರ್ ವೀಧಿ ಬಳಿ ಚಿಯರ್ ಫಾರ್ ಇಂಡಿಯಾ ಘೋಷವಾಕ್ಯದಡಿ ಇಂದು ಬೆಳಗ್ಗೆ ಆಯೋಜಿಸಿದ್ದ ಒಲಂಪಿಕ್ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ “ಸೈಕಲ್ ರೈಡ್’ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ಮೋದಿ “ಖೇಲೋ ಇಂಡಿಯಾ” ಮೂಲಕ ಕ್ರೀಡಾಪಟುಗಳಿಗೆ ಆದ್ಯತೆ ನೀಡಿದರೆ, ಜೀತೋ ಇಂಡಿಯಾ ಎಂದು ಹೇಳುವ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸಿದ್ದಾರೆ. ಅದರ ಭಾಗವಾಗಿ ದೇಶವ್ಯಾಪಿ ನಡೆಯುತ್ತಿರುವ ಸೈಕಲ್ ರ್ಯಾಲಿಯಲ್ಲಿ 56 ಸಾವಿರ ಯುವಜನರು ಪಾಲ್ಗೊಳ್ಳುತ್ತಿದ್ದಾರೆ ಎಂದು ಸಿಎಂ ಹೇಳಿದರು.
ಯುವ ಜನತೆ ದೇಶದ ಶಕ್ತಿ ಹಾಗೂ ಭವಿಷ್ಯ. ಶಿಸ್ತು ಒಳ್ಳೆಯ ನಡುವಳಿಕೆ ರೂಪಗೊಳ್ಳಲು ಕಾರಣವಾಗುತ್ತದೆ. ಮುಂಬರುವ ದಿನಗಳಲ್ಲಿ ತಮ್ಮ ಸರ್ಕಾರ ಯುವಜನರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದೆ ಎಂದು ಸೂಕ್ಷ್ಮವಾಗಿ ತಿಳಿಸಿದರು.
