ಇಬ್ಬರು ಮಕ್ಕಳಿರುವ ಕುಟುಂಬಕ್ಕೆ ಮಾತ್ರವೇ ಸರ್ಕಾರಿ ಸೌಲಭ್ಯ ಕೊಡಿ: ಭಾರತಿ ಶೆಟ್ಟಿ ಆಗ್ರಹ

ಬೆಂಗಳೂರು: ಉತ್ತರ ಪ್ರದೇಶ ಮಾದರಿಯಂತೆ ಕರ್ನಾಟಕದಲ್ಲಿಯೂ ಎರಡು ಮಕ್ಕಳ ನೀತಿಯನ್ನು ಜಾರಿಗೆ ತನ್ನಿ ಎಂದು ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಭಾರತಿ ಶೆಟ್ಟಿ, ದೇಶ, ರಾಜ್ಯದಲ್ಲಿ ಜನಸಂಖ್ಯೆ ಸ್ಪೋಟವಾಗುತ್ತಿದೆ. ಸಾಕಷ್ಟು ಪ್ರಯತ್ನ ಪಟ್ಟರೂ ಇದರ ನಿಯಂತ್ರಣ ಸಾಧ್ಯವಾಗಿಲ್ಲ. ಹೀಗಾಗಿ, ಸರ್ಕಾರ ಕೊಡುತ್ತಿರುವ ಸವಲತ್ತು, ಸಬ್ಸಿಡಿ ಬಳಕೆಗೆ ಉತ್ತರಪ್ರದೇಶ ಮಾದರಿ ಅನುಸರಿಸಬೇಕು ಎಂದಿದ್ದಾರೆ.
ಎರಡು ಮಕ್ಕಳು ಇರುವ ಕುಟುಂಬಕ್ಕೆ ಮಾತ್ರವೇ ಸರ್ಕಾರಿ ಸೌಲಭ್ಯ ನೀಡುವಂತೆ ಒತ್ತಾಯಿಸಿದರು. ಉತ್ತರಪ್ರದೇಶ ಮಾದರಿಯಲ್ಲಿ ಸರ್ಕಾರಿ ಸವಲತ್ತು ಮತ್ತು ಸಬ್ಸಿಡಿ ಸೌಲಭ್ಯ ಪಡೆಯಲು ಎರಡು ಮಕ್ಕಳ ಮಿತಿ ನೀತಿಯನ್ನು ಅಳವಡಿಸಿಕೊಳ್ಳಬೇಕು ಎಂಬ ಭಾರತಿ ಶೆಟ್ಟಿ ಆಗ್ರಹಕ್ಕೆ ಬೊಮ್ಮಾಯಿ ಅವರಿಂದ ಉತ್ತರ ಕೊಡಿಸುವುದಾಗಿ ಸರ್ಕಾರದ ಪರವಾಗಿ ಭೈರತಿ ಬಸವರಾಜ್ ಭರವಸೆ ನೀಡಿದ್ದಾರೆ.
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ವರಿಗೂ ಸಮಪಾಲು ಅನ್ನೋದು ಅನ್ವಯ ಆಗಲ್ಲ. ಹೆಚ್ಚು ಮಕ್ಕಳಿದ್ದವರ ಮನೆಗೆ ಹೆಚ್ಚು ಅಕ್ಕಿ ಕೊಡುವಂತಹ ಪರಿಸ್ಥಿತಿ ಇದೆ. ಒಂದು ಮನೆಗೆ ಒಂದು ಕ್ವಿಂಟಾಲ್ ಅಕ್ಕಿ ಕೊಡ್ತಿದೆ ಸರ್ಕಾರ. ಸಬ್ಸಿಡಿಯಲ್ಲಿ ಹೆಚ್ಚು ಮಕ್ಕಳಿರುವ ಮನೆಗೆ ಹೆಚ್ಚು ಅಕ್ಕಿ ಕೊಡುತ್ತಿದ್ದು, ಜನಸಂಖ್ಯೆ ಹೆಚ್ಚಳ ಆರ್ಥಿಕ ಕುಸಿತಕ್ಕೂ ಕಾರಣವಾಗುತ್ತಿದೆ ಎಂದಿದ್ದಾರೆ.
