ಕೆಆರ್ಎಸ್ ಡ್ಯಾಮ್ ಬಿರುಕು ಬಿಟ್ಟಿದೆ ಎಂದು ಹೇಳಿಲ್ಲ: ಸಂಸದೆ ಸುಮಲತಾ ಅಂಬರೀಶ್

ಮೈಸೂರು : ಕೆ.ಆರ್.ಎಸ್. ಡ್ಯಾಮ್ ಬಿರುಕು ಬಿಟ್ಟಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಸೀದಾ ಸಾದ ಉಲ್ಟಾ ಹೊಡೆದಿದ್ದಾರೆ. ಈ ಮೊದಲು ಕೆ.ಆರ್.ಎಸ್. ಡ್ಯಾಮ್ ಬಿರುಕು ಬಿಟ್ಟಿದೆ ಎಂದು ನೀಡಿದ್ದ ಹೇಳಿಕೆಗೆ ತದ್ವಿರುದ್ಧವಾಗಿ ಹೇಳಿದ್ದಾರೆ. ಆದರೆ ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸುಮಲತಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೆ.ಆರ್.ಎಸ್. ಬಿರುಕು ಬಿಟ್ಟಿದೇಯಾ ಅಂತ ನಾನು ಸಭೆಯಲ್ಲಿ ಕೇಳಿದ್ದೇನಷ್ಟೆ. ಬಿರುಕು ಬಿಟ್ಟಿದೆ ಅಂತ ಖಚಿತವಾಗಿ ನಾನು ಹೇಳಿಲ್ಲ ಎಂದು ಸುಮಲತಾ ಮಾತಿಗೆ ತಪ್ಪಿದ್ದಾರೆ. ಬಿರುಕು ಬಿಟ್ಟಿಲ್ಲ ಅಂತ ನಾನು ಹೇಳದಿದ್ದರೂ ಹೊರಗೆ ಬೇರೆ ರೀತಿ ಅರ್ಥೈಸಲಾಗಿದೆ. ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಯಿಂದ ಕಂಪನ ಉಂಟಾಗಿ ಕೆ.ಆರ್. ಎಸ್ ಡ್ಯಾಮ್ ಗೆ ಧಕ್ಕೆಯಾಗುತ್ತಿದೆ ಎಂಬ ಆತಂಕವಿದೆ ಎಂದು ಹೇಳಿದ್ದಾರೆ.
ಬೇಬಿ ಬೆಟ್ಟದ ಸುತ್ತ ದ್ರೋಣ್ ನಲ್ಲಿ ರೆಕಾರ್ಡ್ ಮಾಡಿಸಿ ಎಂದು ಹೇಳಿದ್ರೆ, ಗಣಿ ಇಲಾಖೆಯವರು ನಮ್ಮ ಬಳಿ ದ್ರೋಣ್ ಇಲ್ಲ. ಬೇರೆ ಕಡೆಯಿಂದ ತೆಗೆದುಕೊಂಡು ಬರಲು ಬಾಡಿಗೆಗೆ ಹಣವಿಲ್ಲ ಎನ್ನುತ್ತಿದ್ದಾರೆ ಎಂದು ಸುಮಲತಾ ಆಕ್ರೋಶ ವ್ಯಕ್ತಪಡಿಸಿದರು.
ಕೆ.ಆರ್.ಎಸ್ ಡ್ಯಾಮ್ ಬಿರುಕು ಬಿಟ್ಟಿದೆ ಎಂದು ರಾಜಕೀಯ ಗದ್ದಲಕ್ಕೆ ಕಾರಣವಾದ ಸುಮಲತಾ ಈಗ ಉಲ್ಟಾ ಹೊಡೆಯುವುದರಲ್ಲಿ ಏನೊ ಮಸಲತ್ತು ಇದೆ. ಅದು ಕೆಲವೇ ದಿನಗಳಲ್ಲಿ ಹೊರ ಬರಲಿದೆ.
