
ನವದೆಹಲಿ : ಕೋವಿಡ್ ಮತ್ತು ಒಮಿಕ್ರಾನ್ ವೇರಿಯಂಟ್ ವಿರುದ್ಧ ಕಟ್ಟೆಚ್ಚರ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಆಲ್ ಇಂಡಿಯಾ ರೇಡಿಯೊದಲ್ಲಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಜ್ಞಾನಿಗಳು ಹೊಸ ಓಮಿಕ್ರಾನ್ ರೂಪಾಂತರವನ್ನು ಅಧ್ಯಯನ ಮಾಡುತ್ತಿದ್ದಾರೆ ಮತ್ತು ಪ್ರತಿದಿನ ಹೊಸ ಡೇಟಾ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಹೊಸ ರೂಪಾಂತರದ ವಿರುದ್ಧ ಹೋರಾಡಲು ಜನರ ಸ್ವಯಂ-ಅರಿವು ಮತ್ತು ಸ್ವಯಂ-ಶಿಸ್ತು ದೇಶದ ಶಕ್ತಿಯಾಗಿದೆ. ಈ ಸಾಮೂಹಿಕ ಶಕ್ತಿಯೇ ಕೋವಿಡ್ ಅನ್ನು ಸೋಲಿಸುತ್ತದೆ.ಈ ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಹೊಸ ವರ್ಷ 2022 ರಲ್ಲಿ ಹೆಜ್ಜೆ ಹಾಕಬೇಕೆಂದು ಜನತೆಗೆ ಕರೆ ನೀಡಿದರು.
ಪ್ರತಿಯೊಬ್ಬರ ಪ್ರಯತ್ನದಿಂದಲೇ ಭಾರತವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಾಧ್ಯವಾಯಿತು. ಭಾರತದ ವ್ಯಾಕ್ಸಿನೇಷನ್ ಅಂಕಿಅಂಶಗಳನ್ನು ವಿಶ್ವದ ಇತರ ದೇಶಗಳೊಂದಿಗೆ ಹೋಲಿಸಿದಾಗ, ದೇಶ ದೊಡ್ಡ ಸಾಧನೆಯನ್ನು ಮಾಡಿದೆ ಎಂದ ಪ್ರಧಾನಿ, ಲಸಿಕೆ ಪ್ರಮಾಣ 140 ಮಿಲಿಯನ್ ದಾಟಿರುವುದು ಪ್ರತಿಯೊಬ್ಬ ಭಾರತೀಯನ ಸಾಧನೆಯಾಗಿದೆ ಎಂದರು.
ಇದೇ ತಿಂಗಳು ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದಾಗ ತಮಿಳುನಾಡಿನಲ್ಲಿ ನಡೆದ ಅವಘಡದಲ್ಲಿ ಬಲಿಯಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಸ್ಮರಿಸಿದ ಪ್ರಧಾನಿ ಕಳೆದ ಆಗಸ್ಟ್ ನಲ್ಲಿ ಅವರಿಗೆ ಶೌರ್ಯ ಚಕ್ರವನ್ನು ನೀಡಲಾಗಿತ್ತು ಎಂದರು. ಈ ಘಟನೆಯಲ್ಲಿ ದೇಶದ ಮೊದಲ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಕೂಡ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಷಾದಿಸಿದರು.
ಪರೀಕ್ಷಾ ಪೇ ಚರ್ಚಾಗೆ ನೋಂದಣಿ
ಪರೀಕ್ಷಾ ಪೆ ಚರ್ಚಾವನ್ನು ನಡೆಸುವುದಾಗಿ ಘೋಷಿಸಿದ ಪ್ರಧಾನಿ, ಈ ಕಾರ್ಯಕ್ರಮದ ನೋಂದಣಿ ಇದೇ 28 ರಂದು ಆರಂಭವಾಗಿ ಬರುವ ಜನವರಿ 20 ರವರೆಗೆ ಮುಂದುವರಿಯಲಿದೆ ಎಂದು ತಿಳಿಸಿದರು. ಇದಕ್ಕಾಗಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಆನ್ಲೈನ್ ಸ್ಪರ್ಧೆ ಸಹ ಆಯೋಜಿಸಲಾಗುವುದು.ಇದರಲ್ಲಿ ಎಲ್ಲರೂ ಭಾಗವಹಿಸುವಂತೆ ಕೋರಿದರು. ಪರೀಕ್ಷೆಗಳು, ವೃತ್ತಿ, ಯಶಸ್ಸು ಮತ್ತು ವಿದ್ಯಾರ್ಥಿ ಜೀವನಕ್ಕೆ ಸಂಬಂಧಿಸಿದ ಹಲವು ಅಂಶಗಳ ಬಗ್ಗೆ ಚಿಂತನಮಂಥನ ನಡೆಸಲಾಗುವುದು ಎಂದೂ ಹೇಳಿದರು. .
