ವಿವಾದಿತ ಪೋಸ್ಟ್ ಹಾಕಿದ್ದ ಅಭಿಷೇಕ್ ಪರೀಕ್ಷೆ ಬರೆಯುವ ಹಿನ್ನೆಲೆ: ಕಾಲೇಜು ಬಳಿ ಪೊಲೀಸ್ ಬಿಗಿ ಬಂದೋಬಸ್ತ್

ಹುಬ್ಬಳ್ಳಿ: ವಿವಾದಿತ ಪೋಸ್ಟ್ ಹಾಕಿ ಹುಬ್ಬಳ್ಳಿಯ ಗಲಭೆಗೆ ಕಾರಣವಾಗಿದ್ದ ಬಂಧಿತ ಆರೋಪಿ ಅಭಿಷೇಕನಿಗೆ ನ್ಯಾಯಾಲಯವು ಇಂದಿನಿಂದ ಆರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಮಹೇಶ ಪಿಯು ಕಾಲೇಜಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಅಭಿಷೇಕ ಹಿರೇಮಠ ವಿವಾದಾತ್ಮಕ ಪೋಸ್ಟ್ ಮಾಡುವ ಮೂಲಕ ಹಳೇ ಹುಬ್ಬಳ್ಳಿಯಲ್ಲಿ ಗಲಭೆಗೆ ಕಾರಣವಾಗಿದ್ದ, ಯುವಕನಿಗೆ ಪರೀಕ್ಷೆ ಬರೆಯಲು ಕೋರ್ಟ್ ಅನುಮತಿ ನೀಡಿತು. ಹಾಗಾಗಿ ಮಹೇಶ ಪಿಯು ಕಾಲೇಜಿನಲ್ಲಿ ಈಗ ಆರೋಪಿ ಅಭಿಷೇಕನಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷೆ ಕೊಠಡಿ ಹಾಗೂ ಕಾಲೇಜು ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಬಂಧಿತ ಆರೋಪಿ ಅಭಿಷೇಕ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಇಂದು ಬಿಜಿನೆಸ್ ಸ್ಟಡೀಸ್ ವಿಷಯದ ಪರೀಕ್ಷೆಯನ್ನು ಬರೆಯಲಿದ್ದಾನೆ. ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಅಭಿಷೇಕನನ್ನು ಪೊಲೀಸರು ಕೇಂದ್ರ ಕಾರಾಗೃಹದಿಂದ ಮಹೇಶ್ ಪಿಯು ಕಾಲೇಜು ಆವರಣಕ್ಕೆ ಕರೆದುಕೊಂಡು ಬಂದು ಪರೀಕ್ಷೆ ಕೊಠಡಿಗೆ ಬಿಟ್ಟಿದ್ದು, ಪರೀಕ್ಷೆಯ ನಂತರ ಮತ್ತೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಪೊಲೀಸರು ಆರೋಪಿಯನ್ನು ಜೈಲಿಗೆ ಶಿಫ್ಟ್ ಮಾಡಲಿದ್ದಾರೆ.
ಕಳೆದ ಬುಧುವಾರದಂದು ಹುಬ್ಬಳ್ಳಿಯ ನ್ಯಾಯಾಲಯವು ಅಭಿಷೇಕನ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿತು. ನ್ಯಾಯಾಧೀಶರ ಆದೇಶದ ಮೇರೆಗೆ ಈಗ ಪೊಲೀಸರು ಬಿಗಿ ಭದ್ರತೆಯಲ್ಲಿ ಆರೋಪಿ ಅಭಿಷೇಕನಿಗೆ ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.
