ಮದರಸಾಗಳನ್ನು ನಿಷೇಧಿಸುವಂತೆ ಎಂ. ಪಿ. ರೇಣುಕಾಚಾರ್ಯ ಆಗ್ರಹ!

ದಾವಣಗೆರೆ: ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗಲಭೆಕೋರರನ್ನು ಅಮಾಯಕರು ಎಂದಿದ್ದಕ್ಕೆ ನಾಚಿಕೆ ಆಗಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಾಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಹುಬ್ಬಳಿಯಲ್ಲಿ ನಡೆದ ಘಟನೆಗೆ ನೇರವಾಗಿ ಕಾಂಗ್ರೆಸ್ ನವರೇ ಕಾರಣ.
ಕೂಡಲೇ ಕಾಂಗ್ರೆಸ್ ನಾಯಕರು ನಾಡಿನ ಜನತೆಯ ಬೇಷರತ್ ಕ್ಷಮೆ ಕೇಳುವಂತೆ ಆಗ್ರಹಿಸಿದರು. ಯಾರು ದೇಶದ್ರೋಹದ ಕೆಲಸ ಮಾಡುತ್ತಾರೋ ಅವರನ್ನು ಬಂಧಿಸುವುದು ಮಾತ್ರವಲ್ಲ, ಅವರನ್ನು ಗಲ್ಲಿಗೇರಿಸಬೇಕು. ದೇಶದ್ರೋಹದ ಕೆಲಸ ಮಾಡಿದವರ ಕುಟುಂಬಸ್ಥರ ಮತದಾನದ ಹಕ್ಕನ್ನು ಮೊಟಕುಗೊಳಿಸುವುದರ ಜೊತೆಗೆ ಸರ್ಕಾರಿ ಸವಲತ್ತುಗಳನ್ನು ಮೊಟಕುಗೊಳಿಸಬೇಕೆಂದು ರೇಣುಕಾಚಾರ್ಯ ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ನಡೆದ ಘಟನೆ ಪೂರ್ವ ನಿಯೋಜಿತ ಎಂದ ರೇಣುಕಾಚಾರ್ಯ, ಪೊಲೀಸರು ಹಾಗೂ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರ ಹೆಡೆಮುರಿ ಕಟ್ಟುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ನಾನು ಒತ್ತಾಯ ಮಾಡುತ್ತೇನೆ. ಉತ್ತರ ಪ್ರದೇಶದ ಮಾದರಿಯಲ್ಲಿ ದೇಶದ್ರೋಹಿಗಳ ಹೆಡೆಮುರಿ ಕಟ್ಟಬೇಕು.
ಈ ಹಿಂದೆ ನಾನು ದೇವಸ್ಥಾನಗಳಲ್ಲಿ ತೀರ್ಥ ಪ್ರಸಾದ ನೀಡುತ್ತಾರೆ. ಆದರೆ ಮಸೀದಿಗಳಲ್ಲಿ ಮದ್ದು ಗುಂಡು ಸಂಗ್ರಹಿಸುತ್ತಾರೆಂದು ಹೇಳಿದ್ದೆ ಅದು ಈಗ ನಿಜವಾಗಿದೆ. ಮದರಸಾಗಳಲ್ಲಿ ಮಕ್ಕಳ ಮನಸ್ಸಿನ ಮೇಲೆ ದೇಶದ್ರೋಹ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ದೇಶಪ್ರೇಮ ಬಿತ್ತುವ ಕೆಲಸ ಮಾಡುತ್ತೇವೆ. ಕೂಡಲೇ ಮದರಸಾಗಳನ್ನು ನಿಷೇಧಿಸುವಂತೆ ಆಗ್ರಹಿಸಿದರು.
