ಕಾರವಾರದಲ್ಲಿ ಕೊಂಕಣಿ ಭಾಷೆಗೆ ಆದ್ಯತೆ ಕೊಡಬೇಕೆಂದು ಪ್ರಧಾನಿಗೆ ಪತ್ರ

ಕಾರವಾರ: ಮಹಾರಾಷ್ಟ್ರ ಬಳಿಕ ಇದೀಗ ಗೋವಾ ರಾಜ್ಯ ಗಡಿ ಕ್ಯಾತೆ ತೆಗೆದಿದೆ. ಕಾರವಾರದಲ್ಲಿ ಭಾಷಾ ವಿವಾದ ಇದೆ ಎಂದು ಹೇಳಿ ವಿವಾದಿತ ಪ್ರದೇಶ ಎಂದು ಉಲ್ಲೇಖಿಸಿ ಕೊಂಕಣಿ ಭಾಷಾ ಅಭಿಮಾನಿ ಪರಿವಾರ ಕಾರವಾರ ಸಂಘಟನೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ಕಾರವಾರ, ಬೆಳಗಾವಿ ವಿವಾದಿತ ಪ್ರದೇಶ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಪತ್ರದಲ್ಲಿ ಕೊಂಕಣಿ ಮಿಶ್ರಿತ ದೇವನಾಗರಿ ಲಿಪಿಯ ನಾಮಫಲಕ ಅಳವಡಿಕೆ ಮಾಡಲಾಗಿದೆ.
ಏಳೆಂಟು ತಿಂಗಳುಗಳ ಹಿಂದೆ ಭಾಷಾ ಫಲಕ ವಿಚಾರವಾಗಿ ಕಾರವಾರದಲ್ಲಿ ವಿವಾದ ಎದ್ದಿತ್ತು. ಕೊಂಕಣಿ ಮಿಶ್ರಿತ ದೇವನಾಗರಿ ಲಿಪಿಯಲ್ಲಿ ಭಾಷಾ ಫಲಕವನ್ನು ನಗರಸಭೆ ಅಳವಡಿಕೆ ಮಾಡಿತ್ತು. ಇದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿ ನಾಮಫಲಕಕ್ಕೆ ಬಣ್ಣ ಬಳಿದಿದ್ದರು. ಈ ವಿವಾದದ ಕಿಚ್ಚನ್ನೇ ಇಟ್ಟುಕೊಂಡು ಇದೀಗ ಉದ್ಧಟತನ ತೋರಿಸಲಾಗುತ್ತಿದೆ.
ಕಾರವಾರದಲ್ಲಿ ಭಾಷಾ ವಿವಾದ ಇದೆ ಎಂದು ಮೋದಿಗೆ ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಂವಿಧಾನ ನಿಯಮದಂತೆ ಕೊಂಕಣಿಗೆ ಮಾನ್ಯತೆ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಭಾಷೆ ಆಧಾರದ ಮೇಲೆ ರಾಜ್ಯ ವಿಂಗಡಣೆ ಮಾಡುವಾಗ ಬೆಳಗಾವಿ, ಕಾರವಾರ ವಿವಾದಿತ ಪ್ರದೇಶ ಆಗಿತ್ತು. ಈಗಲೂ ಈ ಪ್ರದೇಶದಲ್ಲಿ ಭಾಷಾ ವಿವಾದ ಇದೆ. ಕಾರವಾರದ ಗಡಿ ವಿಚಾರ ಈಗಲೂ ಸುಪ್ರೀಂ ಕೋರ್ಟ್ನಲ್ಲಿದೆ. ಇದರಿಂದ ಕೊಂಕಣಿ ಭಾಷೆಗೆ ಆದ್ಯತೆ ಕೊಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
