ಲಿಂಗಾಯತರು ಬಿಜೆಪಿ ಸ್ವತ್ತು ಅಲ್ಲ: ಡಿ ಕೆ ಶಿವಕುಮಾರ್

ಕಲಬುರಗಿ: ಲಿಂಗಾಯತರು ಕೇವಲ ಬಿಜೆಪಿಯ ಸ್ವತ್ತು ಅಲ್ಲಾ, ಕಾಂಗ್ರೆಸ್ ನಲ್ಲಿಯೂ ಲಿಂಗಾಯತರು ಇದ್ದಾರೆ. ಅಲ್ಲದೆ ಹಲವು ಜನ ಲಿಂಗಾಯತ ನಾಯಕರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಲಿಂಗಾಯತ ನಾಯಕರು ಪಕ್ಷಕ್ಕೆ ಬರಲು ಸಿದ್ದರಿದ್ದು, ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳುವ ವಿಚಾರವಾಗಿ ಎಂ ಬಿ ಪಾಟೀಲ್, ಎಸ್ ಆರ್ ಪಾಟೀಲ್, ಈಶ್ವರ್ ಖಂಡ್ರೆ ಚರ್ಚೆ ನಡೆಸುತ್ತಿದ್ದಾರೆ. ಲಿಂಗಾಯತರು ತಮ್ಮ ಸ್ವತ್ತು ಅನ್ನೋತರ ವರ್ತಿಸುತ್ತಿದ್ದಾರೆ ಎಂದರು.
ಇನ್ನು ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಮ್ಯೂಜಿಕಲ್ ಚೇರ್ ಆಟ ನಡೆಯುತ್ತಿದೆ ಅಂತ ಹೇಳಿಕೆ ನೀಡಿದ ಬಿಜೆಪಿ ಅಧ್ಯಕ್ಷ ಕಟೀಲುಗೆ, ಸಿಎಂ ಹುದ್ದೆ ಕಾದಾಟ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲ ಅದು ಬಿಜೆಪಿಯಲ್ಲಿ ನಡೆದಿದೆ ಅಂತ ತಿರುಗೇಟು ನೀಡಿದರು.
ಸದ್ಯ ಚುನಾವಣೆ ಹತ್ತಿರವಿಲ್ಲಾ, ಕೊರೊನಾ ದಿಂದ ರಾಜಕೀಯ ಸಭೆಗಳಿಗೆ ಅವಕಾಶ ಕೊಟ್ಟಿಲ್ಲ ಹೀಗಾಗಿ ಜನರ ಬಳಿ ಹೋಗಿ ಅವರ ಸಮಸ್ಯೆ ಆಲಿಸುತ್ತಿದ್ದೇವೆ. ಬಂಜಾರ ಸಮಾಜ, ಕರಾವಳಿ ಮಿನುಗಾರರ ಸೇರಿದಂತೆ ಹಿಂದುಳಿದ ಸಮುದಾಯಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾಡಬೇಕಾದ ಅಭಿವೃದ್ಧಿ ಕಾರ್ಯವೈಕರಿಗಳ ಬಗ್ಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
