KAS ಅಧಿಕಾರಿ ರಂಗನಾಥ್ ಗೆ ಸೇರಿದ ಮನೆಗಳ ಮೇಲೆ ಎಸಿಬಿ ದಾಳಿ

ಬೆಂಗಳೂರು: ಕೆಎಎಸ್ ಅಧಿಕಾರಿ ರಂಗನಾಥ್ ಅವರಿಗೆ ಸೇರಿದ ಒಟ್ಟು 5 ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆ ಪತ್ರಗಳನ್ನ ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ ಸಾರ್ವಜನಿಕ ಜಮೀನು ನಿಗಮದ ಪ್ರಧಾನ ವ್ಯವಸ್ಥಾಪಕರಾಗಿದ್ದ ರಂಗನಾಥ್ ಹಿಂದೆ ಬೆಂಗಳೂರಿನ ಉತ್ತರ ತಾಲೂಕು ಉಪನೊಂದಣಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಈ ವೇಳೆ ಗೋಮಾಳ ಜಮೀನನ್ನು ನಿಯಮ ಬಾಹಿರವಾಗಿ ಖಾಸಗಿಯವರಿಗೆ ಪರಭಾರೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಕೋರ್ಟ್ ಸೂಚನೆ ಮೇರೆಗೆ ಎಫ್ ಐ ಆರ್ ದಾಖಲಿಸಿತ್ತು.
ಈ ಹಿನ್ನೆಲೆಯಲ್ಲಿ ಇಂದು ಸುಮಾರು 42 ಎಸಿಬಿ ಅಧಿಕಾರಿಗಳ 5 ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ರಂಗನಾಥ್ ಅವರಿಗೆ ಸೇರಿದ ನ್ಯಾಯಾಂಗ ಬಡಾವಣೆಯಲ್ಲಿರುವ ವಾಸದ ಮನೆ, ನಾಗರಬಾವಿಯಲ್ಲಿರುವ ಸಂಬಂಧಿಕರ ಮನೆ, ದೊಡ್ಡ ಬಳ್ಳಾಪುರದಲ್ಲಿರುವ ಕಲ್ಯಾಣ ಮಂಟಪ ಮತ್ತು ಟೌನ್ ಕನಕ ಶ್ರೀ ಟ್ರಸ್ಟ್ ಕಚೇರಿ, ಅಕ್ಷರ ಪಬ್ಲಿಕ್ ಸ್ಕೂಲ್, ಉತ್ತರ ತಾಲೂಕು ವಿಭಾಗದ ಕಚೇರಿ ಮೇಲೆ ದಾಳಿ ಮಾಡಲಾಗಿದೆ.
ಬೆಂಗಳೂರಿನ ಉತ್ತರ ತಾಲೂಕು ಉಪನೊಂದಣಾಧಿಕಾರಿಯಾಗಿ ವೇಳೆ ಅಂದಿನ ತಹಶಿಲ್ದಾರ್ ಗಮನಕ್ಕೆ ಬಾರದೇ ದಾಖಲೆಗಳನ್ನು ಪರಿಶೀಲನೆ ಮಾಡದೇ ಕೇವಲ ಮೂರೇ ದಿನಗಳಲ್ಲಿ ಗೋಮಾಳ ಜಮೀನನ್ನು ಪರಭಾರೆ ಮಾಡಿರುವ ಆರೋಪ ರಂಗನಾಥ್ ಮೇಲಿದೆ.
