ಹಿಂದೂ ಮನೋಧರ್ಮಕ್ಕೆ ವಿರುದ್ಧದ ಹೇಳಿಕೆ: ಶಿವಕುಮಾರ್ ಗೆ ಸಿಎಂ ಟಾಂಗ್

ಬೆಂಗಳೂರು: ಹಿಂದೂ ದೇವಸ್ಥಾನ ಮತ್ತು ಹಿಂದೂ ಭಕ್ತರ ಮನೋಧರ್ಮಕ್ಕೆ ವಿರುದ್ಧವಾದ ಅಭಿಪ್ರಾಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ದೇಗುಲ ಬಿಜೆಪಿ ಕಾರ್ಯಕರ್ತರಿಗೆ ಹಸ್ತಾಂತರ ಹೇಳಿಕೆ ನೀಡಿರುವ ಶಿವಕುಮಾರ್ ಅವರಿಗೆ ಬೆಕ್ಕಿನ ಕನಸಿನಲ್ಲಿ ಇಲಿ ಎಂಬಂತಾಗಿದೆ ಎಂದರು.
ಹಿಂದೂ ದೇಗುಲಗಳನ್ನು ನಾವು ಯಾರಿಗೂ ಹಸ್ತಾಂತರ ಮಾಡುತ್ತಿಲ್ಲ. ಅವುಗಳನ್ನು ಸರ್ಕಾರದ ಕಟ್ಟುಪಾಡುಗಳಿಂದ ಮುಕ್ತ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಓಮಿಕ್ರಾನ್ ಪ್ರಕರಣಗಳು ಇಡೀ ದೇಶದಲ್ಲಿ ಹೆಚ್ಚಾಗುತ್ತಿವೆ. ಎಂಟು ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಕೇಂದ್ರ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನಾವು ಕೆಲವು ಕಟ್ಟೆಚ್ಚರಗಳನ್ನು ತೆಗೆದುಕೊಂಡಿದ್ದೇವೆ. ಬರುವ ದಿನಗಳಲ್ಲಿ ಈ ಪ್ರಕರಣಗಳ ಸ್ಥಿತಿಗತಿ ಪರಿಶೀಲಿಸಿ ಆರೋಗ್ಯ ಸೌಲಭ್ಯ ಸಿದ್ದತೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.
ವಿಧಾನಸೌಧದಲ್ಲಿ ಶುಕ್ರವಾರ ಆಯೋಜಿಸಿರುವ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಜಿಲ್ಲಾಮಟ್ಟದ ಹಲವು ಆಡಳಿತಾತ್ಮಕ ವಿಚಾರ ಮತ್ತು ಯೋಜನೆಗಳ ಅನುಷ್ಠಾನ ಸಂಬಂಧ ಸುದೀರ್ಘವಾಗಿ ಚರ್ಚೆ ಮಾಡಿ, ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಹೇಳಿದ ಸಿಎಂ ಬೊಮ್ಮಾಯಿ, ರಾಜ್ಯ ಎಲ್ಲಾ ಸವಾಲುಗಳಿಂದ ಮುಕ್ತವಾಗಿ ಜನಸಾಮಾನ್ಯರ ಬದುಕು ಹಸನಾಗಲಿ. ಹೊಸ ವರ್ಷ ಎಲ್ಲರಿಗೂ ಹರ್ಷ ತರಲಿ ಎಂದೂ ಹೇಳಿದರು.
