ಕಮಲಾಪುರದಲ್ಲಿ ಕನ್ನಡ ಜಾತ್ರೆ: ಮೊದಲನೇ ದಿನ ಭವ್ಯ ಚಾಲನೆ

ಕಲಬುರಗಿ: ಹೇರಳ ಸಾಹಿತ್ಯ ಸಂಪತ್ತು ಹೊಂದಿರುವ ಕಲ್ಯಾಣ ಕರ್ನಾಟಕ ಭಾಗವು ಸಾಹಿತ್ಯ ಕ್ಷೇತ್ರಕ್ಕೆ ನಿಲುಕದ ಅದೆಷ್ಟೋ ಸತ್ಯ ಸಂಗತಿಗಳು ಕಣ್ಣಿಗೆ ಕಾಣದಂತೆ ಕಾಲ ಗರ್ಭದಲ್ಲಿ ಅಡಗಿಹೋಗಿದ್ದು, ಇದನ್ನು ಸಂಶೋಧಿಸಿ ನಮೂದಿಸುವ ಲೇಖಕರ ಮತ್ತು ಪ್ರಕಾಶಕರ ಕೊರತೆ ಎದ್ದು ಕಾಣುತ್ತಿದೆ ಎಂದು ಕಲಬುರಗಿ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಬಾನಾಳ ಅವರು ಕಳವಳ ವ್ಯಕ್ತಪಡಿಸಿದರು.
ಕೆಂಬಾಳೆ ಖ್ಯಾತಿಯ ಕಮಲಾಪೂರದ ಆಕೃತಿ ಬಿರಾದರ್ ಕನ್ವೆನ್ಶನ್ ಹಾಲ್ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಲಬುರಗಿ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಅವರು ಮಾತನಾಡಿದರು. ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ ಕವಿರಾಜಮಾರ್ಗ ಕೃತಿ ನೀಡಿದ ಮತ್ತು ಹಿಂದೂ ನ್ಯಾಯಶಾಸ್ತ್ರದ ಮಿತಾಕ್ಷರ ಗ್ರಂಥ ನೀಡಿದ ನೆಲ ಇದಾಗಿದೆ. ಕಲ್ಯಾಣ ಕರ್ನಾಟಕ ಭಾಗ ತನ್ನ ಒಡಲಿನಲ್ಲಿ ಸಾಹಿತ್ಯ ಕುರಿತು ಪ್ರಜ್ವಲವಾದ ಇತಿಹಾಸ ಇಟ್ಟುಕೊಂಡಿದ್ದು, ಸಾಹಿತ್ಯಾಸಕ್ತರಿಗೆ, ಸಂಶೋಧಕರಿಗೆ ಸಂಶೋಧನೆಗೆ ಅದು ಕೈ ಬೀಸಿ ಕರೆಯುತ್ತಿದೆ ಎಂದರು.
