
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಮುಂದುವರೆದಿದೆ. ಪುಟ್ಟ ದೇಶದ ಮೇಲೆ ಸಮರ ಸಾರಿರುವ ರಷ್ಯಾ ಬಹುತೇಕ ಉಕ್ರೇನ್ ಪ್ರದೇಶಗಳ ಮೇಲೆ ದಾಳಿ ನಡೆಸಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಉಕ್ರೇನ್ ತೊರೆದು ಬೇರೆಡೆ ಆಶ್ರಯ ಪಡೆಯುತ್ತಿದ್ದಾರೆ. ನಿರಂತರವಾಗಿ ಯುದ್ಧಪೀಡಿತ ಪ್ರದೇಶದಿಂದ ವಲಸೆ ಮುಂದುವರೆದಿದೆ.
ಉಕ್ರೇನ್ನ ಪಕ್ಕದ ದೇಶಗಳಲ್ಲಿನ ನಿರಾಶ್ರಿತರ ಶಿಬಿರಗಳಿಗೆ ಉಕ್ರೇನಿಯನ್ ನಾಗರಿಕರು ಬರುತ್ತಿದ್ದಾರೆ. ಏತನ್ಮಧ್ಯೆ, ಪೋಲೆಂಡಿನ ನಿರಾಶ್ರಿತರ ಶಿಬಿರದಲ್ಲಿ ಪತಿಯಿಂದ ಬೇರ್ಪಟ್ಟಿರುವ ಉಕ್ರೇನ್ ಮೂಲದ ಭಾರತೀಯ ಸೊಸೆಯೊಬ್ಬರು ಪತ್ತೆಯಾಗಿದ್ದಾರೆ. ಸದ್ಯ ಗರ್ಭಿಣಿಯಾಗಿರುವ ಅವರು ತನ್ನನ್ನು ಇಲ್ಲಿಂದ ರಕ್ಷಿಸಿ ಭಾರತಕ್ಕೆ ಕರೆದೊಯ್ಯುವಂತೆ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಪೋಲೆಂಡ್ನ ವಾರ್ಸಾದಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ನೂರಾರು ಜನರು ಆಶ್ರಯ ಪಡೆದುಕೊಂಡಿದ್ದು, ತಮ್ಮನ್ನು ರಕ್ಷಿಸಿ ಕರೆದೊಯ್ಯುವಂತೆ ಮನವಿ ಮಾಡಿಕೊಂಡಿದ್ದಾರೆ. ತಮಗೆ ಸಹಾಯ ಮಾಡುವಂತೆ ಅವರು ತಮ್ಮ ತಮ್ಮ ದೇಶಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಶಿಬಿರಕ್ಕೆ ಆಹಾರ, ಔಷಧ ಸೇರಿದಂತೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಶಿಬಿರದಲ್ಲಿಯೇ ಉಕ್ರೇನ್ ಮೂಲದ ಭಾರತೀಯ ಸೊಸೆ ಪತ್ತೆಯಾಗಿದ್ದಾರೆ.
ಸದ್ಯ ಗರ್ಭಿಣಿಯಾಗಿರುವ ಮಹಿಳೆಯೊಬ್ಬರು ಭಾರತೀಯ ಪತಿಯಿಂದ ಬೇರ್ಪಟ್ಟಿದ್ದು, ಸಂಕಷ್ಟಕ್ಕೆ ಸಿಲುಕಿರುವ ನನ್ನನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ನನ್ನ ಪತಿ ದೆಹಲಿಯಲ್ಲಿದ್ದು, ನನ್ನನ್ನು ಇಲ್ಲಿಂದ ಭಾರತಕ್ಕೆ ಕರೆದೊಯ್ಯಿರಿ ಎಂದು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
