ಉಡುಪಿಯಲ್ಲಿ ಗುಟುರು ಹಾಕಿದ ನಗರಸಭೆ ಅಧಿಕಾರಿಗಳು: ಲೈಸೆನ್ಸ್ ಇಲ್ಲದೆ ಕಟ್ಟಿದ್ದ ಅಂಗಡಿ ತೆರವು!

ಉಡುಪಿ: ಲೈಸೆನ್ಸ್ ಇಲ್ಲದೆ ಅಂಗಡಿ ಕಟ್ಟಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಉಡುಪಿಯ ಏಕೈಕ ಅಂಗಡಿ ಮಳಿಗೆ ಮೇಲೆ ಇಂದು ನಗರಸಭೆ ಮುಗಿಬಿದ್ದು ತೆರವು ಕಾರ್ಯಾಚರಣೆ ಕೈಗೊಂಡಿದೆ. ಉಡುಪಿಯ ಮಸೀದಿ ರಸ್ತೆಯಲ್ಲಿ ಅತಿಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು ಕಾರ್ಯಾಚರಣೆ ನಡೆದಿದೆ. ಬೆಳ್ಳಂಬೆಳಗ್ಗೆ ಉಡುಪಿ ನಗರಸಭೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷರ ಹೋಟೆಲ್ ತೆರವುಗೊಳಿಸಲಾಗಿದೆ. ಹೋಟೆಲ್ ಮಾಲಿಕ ನಜೀರ್ ಅಹಮ್ಮದ್ ಝರಾಗೆ ಈಗಾಗಲೇ ಹಲವು ಬಾರಿ ಉಡುಪಿ ನಗರಸಭೆ ನೋಟಿಸ್ ನೀಡಿತ್ತು. ನೋಟಿಸ್ಗೆ ಸ್ಪಂದಿಸದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರಿಂದ ಅಂಗಡಿ ತೆರವುಗೊಳಿಸಲಾಗುತ್ತಿದೆ. ಕಟ್ಟಡದಲ್ಲಿನ ‘ಝೈತರ್ ಆನ್’ ಎಂಬ ಮಳಿಗೆಯನ್ನೂ ತೆರವುಗೊಳಿಸಲಾಗಿದೆ. ನಜೀರ್ ಅಹಮದ್ ಎಸ್ಡಿಪಿಐ ಜಿಲ್ಲಾ ಅಧ್ಯಕ್ಷರಾಗಿದ್ದಾರೆ.
ಇನ್ನು ಈ ಕಾರ್ಯಾಚರಣೆ ಕುರಿತು ಮಾತನಾಡಿದ ನಗರಸಭೆ ಪೌರಾಯುಕ್ತ ಉದಯ್ ಕುಮಾರ್, ‘‘ಇದೊಂದು ಅನಧಿಕೃತ ಕಟ್ಟಡ. ಯಾವುದೇ ಪರವಾನಿಗೆಯನ್ನು ತೆಗೆದುಕೊಂಡಿಲ್ಲ. ಕಟ್ಟಡವನ್ನು ತೆರವುಗೊಳಿಸಲು 2018ರಲ್ಲಿ ಆರ್ಡರ್ ಆಗಿದೆ. ಸ್ಟೇ ಆರ್ಡರ್ ಇತ್ತು. ಸ್ಟೇ ವೆಕೆಟ್ ಆಗಿದೆ. ನಗರಸಭೆಯಿಂದ ತೆರವುಗೊಳಿಸಲು ಬಂದಾಗ ಕಟ್ಟಡದ ಮಾಲೀಕರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುತ್ತಿದ್ದಾರೆ. ಈ ಕಟ್ಟಡದಲ್ಲಿ ಪರವಾನಿಗೆ ಇರುವ ಯಾವ ಅಂಗಡಿಗಳು ಇಲ್ಲ. ಉಡುಪಿಯಲ್ಲಿ ಅನಧಿಕೃತವಾಗಿ ಬಿಲ್ಡಿಂಗ್ ಲೈಸನ್ಸ್ ಇಲ್ಲದೆ ಕಟ್ಟಿರುವ ಏಕೈಕ ಕಟ್ಟಡ ಇದು. ನಗರಸಭೆ ವ್ಯಾಪ್ತಿಯಲ್ಲಿ ಪರವಾನಿಗೆ ಇಲ್ಲದ ಕಟ್ಟಡ ಇದೊಂದೇ ಆಗಿದ್ದು, ಕೋರ್ಟ್ನಲ್ಲಿ ಸ್ಟೇ ಆರ್ಡರ್ ತೆರವು ಆಗಿರುವುದರಿಂದ ನಾವು ಕ್ರಮವನ್ನು ಕೈಗೊಂಡಿದ್ದೇವೆ. ಆದಾಯ ತೆರಿಗೆಯನ್ನು ನಗರಸಭೆಗೆ ಅವರು ಕಟ್ಟುತ್ತಿಲ್ಲ. ಈ ಕಟ್ಟಡಕ್ಕೆ ಯಾವುದೇ ಟ್ರೇಡ್ ಲೈಸನ್ಸ್ ಇಲ್ಲ. ಬೇರೆ ಕಟ್ಟಡಗಳಿಗೆ ಇದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ನಮ್ಮ ಮೇಲೆ ರಾಜಕೀಯ ಒತ್ತಡದಂತದ್ದು ಏನೂ ಇಲ್ಲ. ಕಾನೂನು ರೀತಿ ಕ್ರಮ ಜರುಗಿಸಿದ್ದೇವೆ ಎಂದರು.
