ನಿತೀಶ್ ಪ್ರಧಾನಿಯಾದರೆ ದೆಹಲಿಯಲ್ಲಿ ಪಾಕ್ ಧ್ವಜ ಹಾರಿಸುತ್ತಾರೆ: ಬಿಜೆಪಿ ಶಾಸಕ

ಪಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಒಂದೊಮ್ಮೆ ಪ್ರಧಾನಿಯಾದರೆ ದೆಹಲಿಯ ಕೆಂಪುಕೋಟೆಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸುತ್ತಾರೆ ಎಂಬ ಬಿಜೆಪಿ ಶಾಸಕರೊಬ್ಬರ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಿದ ನಂತರ ತಮ್ಮ ನಾಯಕ ನಿತೀಶ್ ಕುಮಾರ್ ತ್ರಿವರ್ಣ ಧ್ವಜವನ್ನು ಹಾರಿಸಲಿ ಎಂದು ಡಿ(ಯು) ನಾಯಕರು ಭಾನುವಾರ ನಡೆದ ಪಕ್ಷದ ಸರ್ವಸದಸ್ಯ ಸಭೆಯಲ್ಲಿ ಆಶಯ ವ್ಯಕ್ತಪಡಿಸಿದರು.
ಅದಕ್ಕೆ ಪ್ರತಿಕ್ರಿಯಿಸಿರುವ ಬಿಸ್ಫಿ ಕ್ಷೇತ್ರದ ಶಾಸಕ ಹರಿಭೂಷಣ್ ಠಾಕೂರ್ ಬಚೋಲ್, ಈ ವಿವಾದಿತ ಹೇಳಿಕೆ ನೀಡಿದ್ದಾರೆ. ‘ನರೇಂದ್ರ ಮೋದಿಗೆ ಯಾವುದೇ ರಾಜಕಾರಣಿಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ನಿತೀಶ್ ಗೆದ್ದರೆ ನಮ್ಮದೇ ಧ್ವಜ ಹಾರಿಸುವ ಬದಲು ಪಾಕಿಸ್ತಾನದ ಧ್ವಹ ಹಾರಿಸುವುದನ್ನು ನಿರೀಕ್ಷಿಸಬಹುದು’ ಎಂದು ಠಾಕೂರ್ ವ್ಯಂಗ್ಯವಾಡಿದ್ದಾರೆ.
ಹೇಳಿಕೆಗೆ ಪ್ರತಿಕ್ರಿಯಿಸಿರುವ ಜೆಡಿ(ಯು) ಹಿರಿಯ ನಾಯಕ ಮತ್ತು ಸಚಿವ ಅಶೋಕ್ ಚೌಧರಿ, ನಾವು ಮಾನವೀಯತೆಯಿಂದ ನೋಡುತ್ತೇವೆ. ಯಾವುದೇ ನಿರ್ದಿಷ್ಟ ಸಮುದಾಯಕ್ಕಾಗಿ ಮೀಸಲಲ್ಲ. ಬಚೋಲ್ಗೆ ಮತ್ತು ಅವರ ಬಣಕ್ಕೆ ಮುಸ್ಲಿಂರೊಂದಿಗೆ ಏನು ಸಮಸ್ಯೆ ಇದೆ? ದೇಶದ ಸ್ವಾತಂತ್ರಕ್ಕಾಗಿ ಮುಸ್ಲಿಂರ ಬಲಿದಾನವಾಗಲಿಲ್ಲವೆ? ದೇಶಕ್ಕಾಗಿ ಅವರು ಹಲವು ರೀತಿಯಲ್ಲಿ ಸೇವೆ ಸಲ್ಲಿಸಲಿಲ್ಲವೇ? ಸೈನ್ಯದಲ್ಲಿಲ್ಲವೆ? ಎಂದು ಪ್ರಶ್ನಿಸಿದರು.
ನಿತೀಶ್ ಕುಮಾರ್ಗೆ ಪ್ರಧಾನಿಯಾಗಲು ಬೇಕಾದ ಎಲ್ಲ ಸಾಮರ್ಥ್ಯವಿದೆ ಎಂದು ಅವರು ಹೇಳಿದರು.
