‘ನಾನು ಇಂದೆಂದಿಗೂ ಚಿತ್ರರಂಗ ತೊರೆಯುವುದಿಲ್ಲ’; ಅಭಿಮಾನಿಗಳೆದುರು ಚಿರಂಜೀವಿ ಶಪಥ

ನಟ ಚಿರಂಜೀವಿ ಅವರು ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಶ್ರಮಿಸಿದ್ದಾರೆ.
ಅವರು ಮಾಡಿದ ಸಾಧನೆ ಹಾಗೂ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಭಾರತೀಯ ಸಿನಿಮೋತ್ಸದಲ್ಲಿ ಅವರಿಗೆ 2022ನೇ ಸಾಲಿನ ‘ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ’ ಪ್ರಶಸ್ತಿ ಘೋಷಿಸಲಾಗಿತ್ತು. ಸೋಮವಾರ (ನವೆಂಬರ್ 29) ಈ ಗೌರವವನ್ನು ಅವರು ಸ್ವೀಕರಿಸಿ ಮಾತನಾಡಿದ್ದಾರೆ. ಇನ್ನೆಂದೂ ಚಿತ್ರರಂಗ ತೊರೆಯುವುದಿಲ್ಲ ಎಂದು ಚಿರಂಜೀವಿ
ಹೇಳಿದ್ದಾರೆ.
‘ನನಗೆ ಈ ಪ್ರಶಸ್ತಿ ನೀಡಿದ್ದಕ್ಕಾಗಿ ನಾನು ಫಿಲ್ಮ್ ಫೆಸ್ಟಿವಲ್ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಕೆಲವು ಮನ್ನಣೆಗಳು ವಿಶೇಷವಾದವು. ಆ ಪೈಕಿ ಈ ಪ್ರಶಸ್ತಿ ಕೂಡ ಒಂದು. ನಾನು ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ. ನನಗೆ ಸಿಕ್ಕ ಖ್ಯಾತಿ, ಹೆಸರು, ವರ್ಚಸ್ಸು, ಎಲ್ಲಾ ಸವಲತ್ತುಗಳು, ನನ್ನ ಅಭಿಮಾನಿಗಳ ಅಮೂಲ್ಯವಾದ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಚಿತ್ರರಂಗ ಕಾರಣ. ನಾನು ಸಿನಿಮಾ ಇಂಡಸ್ಟ್ರಿಗೆ ಋಣಿಯಾಗಿದ್ದೇನೆ. ನಾನು ನನ್ನ ತಂದೆ-ತಾಯಿಗೆ ಕೊನಿಡೇಲ ಶಿವಶಂಕರ ವರ ಪ್ರಸಾದ್ ಆಗಿ ಜನಿಸಿದೆ. ಚಿತ್ರರಂಗದಲ್ಲಿ ಚಿರಂಜೀವಿಯಾಗಿ ಮರುಜನ್ಮ ಪಡೆದಿದ್ದೇನೆ’ ಎಂದಿದ್ದಾರೆ ಅವರು.
ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ಚಿರಂಜೀವಿ ಅವರು ನಟನೆ ತೊರೆದಿದ್ದರು. ಇದನ್ನು ಮುಂದೆಂದೂ ಮತ್ತೆ ಆ ತಪ್ಪು ಮಾಡುವುದಿಲ್ಲ ಎಂದಿದ್ದಾರೆ ಚಿರಂಜೀವಿ. ‘ನಾನು ಕಳೆದ 45 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಒಂದು ದಶಕ ರಾಜಕೀಯದಲ್ಲಿ ಕಳೆದಿದ್ದೇನೆ. ಕಾರಣಾಂತರಗಳಿಂದ ನಾನು ಚಿತ್ರರಂಗಕ್ಕೆ ಮರಳಬೇಕಾಯಿತು. ಜನರು ನನ್ನನ್ನು ಹೇಗೆ ಸ್ವೀಕರಿಸಬಹುದು ಎನ್ನುವ ಕುತೂಹಲ ಇತ್ತು. ಅವರು ಮತ್ತೆ ಅದೇ ರೀತಿಯ ಪ್ರೀತಿ ತೋರಿದರು. ಅವರು ನನ್ನ ಆಶ್ಚರ್ಯವನ್ನು ದ್ವಿಗುಣಗೊಳಿಸಿದ್ದಾರೆ. ಇದು ನನ್ನ ಅಭಿಮಾನಿಗಳೊಂದಿಗೆ ನನಗಿರುವ ಬಾಂಧವ್ಯ. ಇನ್ನು ನಾನು ಎಂದಿಗೂ ಚಿತ್ರರಂಗವನ್ನು ತೊರೆಯುವುದಿಲ್ಲ ಎಂದು ನನ್ನ ಅಭಿಮಾನಿಗಳಿಗೆ ಭರವಸೆ ನೀಡುತ್ತೇನೆ’ ಎಂದಿದ್ದಾರೆ ಚಿರಂಜೀವಿ.
