ಸೋಲಿಗೆ ನೆಪ ಹೇಳುವುದಿಲ್ಲ, ಬ್ಯಾಟಿಂಗ್ ಚೆನ್ನಾಗಿ ಮಾಡಲಿಲ್ಲ ಅಷ್ಟೆ ಎಂದರು ರೋಹಿತ್

ವಿಕೆಟ್ಕೀಪರ್ ಬ್ಯಾಟರ್ ಕೆ. ಎಲ್ ರಾಹುಲ್ ಬಾಂಗ್ಲಾ ಬ್ಯಾಟ್ಸ್ಮನ್ ಮೆಹೆದಿ ಹಸನ್ ನೀಡಿದ ಕ್ಯಾಚ್ ಬಿಟ್ಟ ಕಾರಣ ಟೀಮ್ ಇಂಡಿಯಾದ ಪಾಲಿಗೆ ಸೋಲಿನ ಗಂಟು ದೊರೆಯಿತು. ಆದರೆ, ಅದಕ್ಕೆ ಮೊದಲು ಭಾರತ ತಂಡ ಉತ್ತಮವಾಗಿ ಬ್ಯಾಟ್ ಕೂಡ ಮಾಡಿರಲಿಲ್ಲ. ಪ್ರಮುಖ ಆಟಗಾರರು ಬೇಗನೆ ಕ್ರೀಸ್ ತೊರೆದ ಕಾರಣ ಕನಿಷ್ಠ ಪಕ್ಷ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ.
ಇದನ್ನು ಪಂದ್ಯದ ಬಳಿಕ ರೋಹಿತ್ ಶರ್ಮ ಅವರೇ ಒಪ್ಪಿಕೊಂಡಿದ್ದು, ಸೋಲಿಗೆ ನೆಪ ಹೇಳುವುದಿಲ್ಲ ಎಂದಿದ್ದಾರೆ.
‘ನಾವು ಗೆಲುವಿನ ಅಂಚಿನಲ್ಲಿ ಎಡವಿದೆವು. ಕಡಿಮೆ ಮೊತ್ತವನ್ನು ಪೇರಿಸಿದ ಹೊರತಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡಿದೆವು. ೪೦ ಓವರ್ಗಳ ತನಕ ಪ್ರತಿ ಎಸೆತವನ್ನೂ ಎಚ್ಚರಿಕೆಯಿಂದ ಮಾಡಿದೆವು. ಆದರೆ, ಸೋಲಿಗೆ ಬ್ಯಾಟಿಂಗ್ ವಿಭಾಗವೇ ಹೊಣೆ. ನಾವು ಹೆಚ್ಚು ರನ್ ಗಳಿಸಲಿಲ್ಲ ಹಾಗೂ ಅದಕ್ಕಾಗಿ ನಮಗೆ ಯಾವುದೇ ವಿನಾಯಿತಿ ಇಲ್ಲ,’ ಎಂದು ಅವರು ಹೇಳಿದ್ದಾರೆ.
”೨೫ನೇ ಓವರ್ ವೇಳೆಗೆ ನಾವು ೨೪೦ರಿಂದ ೨೫೦ ರನ್ ಬಾರಿಸುತ್ತೇವೆ ಎಂದು ಅಂದುಕೊಂಡಿದ್ದೆವು. ಆದರೆ, ಅಷ್ಟು ರನ್ ಪೇರಿಸಲು ನಮಗೆ ಸಾಧ್ಯವಾಗಲಿಲ್ಲ. ಅದುವೇ ನಮ್ಮ ಸೋಲಿಗೆ ಕಾರಣವಾಯಿತು. ಇನ್ನೊಂದು ೨೦ರಿಂದ ೨೫ ರನ್ ಹೆಚ್ಚುವರಿಯಾಗಿ ನಮ್ಮ ಖಾತೆಯಲ್ಲಿ ಇದ್ದಿದ್ದರೆ ಗೆಲುವು ಸಾಧ್ಯವಿತ್ತು. ಅದರೆ ಸತತವಾಗಿ ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲು ಎದುರಿಸಿದೆವು,’ ಎಂದು ರೋಹಿತ್ ಪಂದ್ಯದ ಬಳಿಕ ಹೇಳಿದ್ದಾರೆ.
‘ಈ ಮಾದರಿಯ ಪಿಚ್ನಲ್ಲಿ ಯಾವ ರೀತಿ ಆಡಬೇಕು ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ನಾವು ಇಂಥ ವಿಕೆಟ್ನಲ್ಲಿ ಆಡಿರುವ ಅನುಭವ ಹೊಂದಿರುವ ಕಾರಣ ಸೋಲಿಗೆ ನೆಪ ಹೇಳಲು ಸಾಧ್ಯವಿಲ್ಲ. ಆದರೆ, ಒಂದೆರಡು ಅಭ್ಯಾಸ ಪಂದ್ಯಗಳಿಂದ ಪಿಚ್ಗೆ ಹೊಂದಾಣಿಕೆ ಆಗುವುದು ಹೇಗೆ ಎಂಬುದು ಗೊತ್ತಿಲ್ಲ. ಆದರೆ, ಮುಂದಿನ ಪಂದ್ಯಗಳಲ್ಲಿ ತಿರುಗೇಟು ನೀಡುವ ಎಲ್ಲ ಸಾಧ್ಯತೆಗಳು ಇವೆ,’ ಎಂಬುದಾಗಿ ರೋಹಿತ್ ನುಡಿದಿದ್ದಾರೆ.
