Breaking NewsLatestಅಂಕಣಗಳುರಾಜ್ಯಲೇಖನಗಳುವಿಶೇಷಸುದ್ದಿ

ಯುಗಾದಿ ಹಬ್ಬದ ಆಚರಣೆ ಈ ರೀತಿ ಇರಲಿ: ಹೊಸ ವರುಷ ಎಲ್ಲರಿಗೂ ಹರುಷ ತರಲಿ

ಯುಗಾದಿ ಎಂದರೆ ಯುಗದ ಆದಿ. ಹೊಸ ಸಂವತ್ಸರವೊಂದರ ಆರಂಭ. ಬ್ರಹ್ಮನು ಈ ಜಗತ್ತನ್ನು ಸೃಷ್ಟಿಸಿದ ದಿನ. ಏಪ್ರಿಲ್ 2ರಂದು ಶುಭಕೃತ ನಾಮ ಸಂವತ್ಸರ ಆರಂಭವಾಗುತ್ತಿದೆ. ಹೆಸರಿನಲ್ಲಿರುವ ಶುಭ ಜಗತ್ತಿಗೆಲ್ಲ ಶುಭವನ್ನೇ ತರಲಿ, ಹೊಸ ವರುಷಕೆ ಹೊಸ ಹರುಷವ ತರಲಿ ಎಂದು ಹಾರೈಸುತ್ತಾ ಯುಗಾದಿ ಹಬ್ಬವನ್ನು ಹೇಗೆ ಆಚರಣೆ ಮಾಡುತ್ತಾರೆ ಇಲ್ಲಿದೆ ನೋಡಿ ಮಾಹಿತಿ 

ಹಬ್ಬದ ಸಿದ್ಧತೆಗಳು ಯುಗಾದಿ ಹಬ್ಬದ ದಿನಾಂಕಕ್ಕಿಂತ ಒಂದು ಅಥವಾ ಎರಡು ದಿನ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಹಬ್ಬದ ಆಚರಣೆಗಾಗಿ ಮನೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ ಮತ್ತು ಅಲಂಕರಿಸಲಾಗುತ್ತದೆ. ಜನರು ತಮ್ಮ ಮತ್ತು ಕುಟುಂಬದ ಸದಸ್ಯರಿಗೆ ಹೊಸ ಬಟ್ಟೆಗಳನ್ನು ಖರೀದಿಸುತ್ತಾರೆ

ಹಬ್ಬದ ದಿನ ಸೂರ್ಯೋದಯಕ್ಕೂ ಮುನ್ನ ಎದ್ದು ತಲೆಗೆ ಹರಳೆಣ್ಣೆ ಹಾಕಿಕೊಂಡು ಸ್ನಾನ ಮಾಡುವುದು ಉತ್ತಮವೆನಿಸಿದೆ. ಕೆಲವರು ಮೈ ಕೈಗೂ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ. ಇದು ಕೂಡಾ ಉತ್ತಮವೇ. ಏಕೆಂದರೆ, ಸೂರ್ಯನ ತಾಪಮಾನ ಹೆಚ್ಚಿರುವ ಈ ದಿನಗಳಲ್ಲಿ ದೇಹವನ್ನು ತಂಪಾಗಿಸುತ್ತದೆ ಹರಳೆಣ್ಣೆ. ಎಣ್ಣೆ ಹಚ್ಚಿಕೊಳ್ಳುವಾಗ ಸಪ್ತ ಚಿರಂಜೀವಿಗಳನ್ನು ಸ್ಮರಿಸಿಕೊಳ್ಳಬೇಕು. 

ಸಪ್ತಚಿರಂಜೀವಿ ಸ್ಮರಣೆ

ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು, ಮಾರ್ಕಂಡೇಯನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ ಸ್ಮರಿಸಬೇಕು.

ಅಶ್ವತ್ಥಾಮ ಬಲಿರ್ವ್ಯಾಸಃ ಹನೂಮಾಂಶ್ಚ ವಿಭೀಷಣಃ ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ

ಸ್ನಾನದ ಬಳಿಕ ವರ್ಷದ ಮೊದಲ ದಿನವಾದ್ದರಿಂದ ಜನರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಈ ದಿನ ಹೊಸ ಬಟ್ಟೆ ಧರಿಸಿದರೆ ವರ್ಷವಿಡೀ ಹೊಸ ಬಟ್ಟೆಗಳು ಸಿಗುತ್ತವೆ ಎಂಬ ನಂಬಿಕೆ ಇದೆ. ಜೊತೆಗೆ, ಹಬ್ಬದ ಸಂಭ್ರಮ ಮೈಗೂಡುತ್ತದೆ. ನಂತರ ಮನೆಯ ಮುಂಬಾಗಿಲು, ದೇವರ ಕೋಣೆಯ ಆವರಣವನ್ನು ಮಾವಿನ ಎಲೆಗಳ ತಳಿರು ತೋರಣಗಳಿಂದ ಅಲಂಕರಿಸಲಾಗುತ್ತದೆ. ಬಾಗಿಲ ಹೊರಗೆ ಚೆನ್ನಾಗಿರುವ ದೊಡ್ಡ ರಂಗೋಲಿಯನ್ನು ಹಾಕಬೇಕು. ಇದಾದ ಬಳಿಕ ಪೂಜೆಯನ್ನು ನಡೆಸಬೇಕು. 

ದೇವರಿಗೆ ಮೊದಲು ಅಭ್ಯಂಗ ಸ್ನಾನ, ಎಲ್ಲ ದೇವರ ಪ್ರತಿಮೆಗಳಿಗೆ ಅಭ್ಯಂಗ ಸ್ನಾನ ಮಾಡಿಸಲಾಗುತ್ತದೆ. ಈ ದಿನ ವಿಶೇಷವಾಗಿ ಬೇವು, ಮಾವು, ಹುಣಸೆ ಹೂಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ನಂತರ ಅಭಿಷೇಕ, ಅಲಂಕಾರ, ನೈವೇದ್ಯ, ಆರತಿ ಎಲ್ಲವನ್ನೂ ಕ್ರಮವಾಗಿ ಮಾಡಿ ಪೂಜೆ ಮುಗಿಸಲಾಗುತ್ತದೆ. 

ದೇವರ ಪೂಜೆಯಾದ ಕೂಡಲೇ ಪಂಚಾಂಗ ಪೂಜೆ ನೆರವೇರಿಸಲಾಗುತ್ತದೆ. ಬಳಿಕ ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಸಬೇಕು. ಈ ವರ್ಷದ ಫಲಾಫಲಗಳನ್ನು ಪಂಚಾಂಗ ಓದುವ ಮೂಲಕ ತಿಳಿದುಕೊಳ್ಳಬೇಕು. 

ಇಷ್ಟೆಲ್ಲ ಆದ ನಂತರ ನೈವೇದ್ಯ ಮಾಡಿದ ಬೇವು ಬೆಲ್ಲವನ್ನು ಎಲ್ಲರಿಗೂ ಹಂಚಿ ಸೇವಿಸಬೇಕು. ಬೇವು ಬೆಲ್ಲದ ಸೇವನೆ ಎಂದರೆ ಜೀವನದಲ್ಲಿ ಕಹಿ ಮತ್ತು ಸಿಹಿಗಳೆರಡನ್ನೂ ಸಮಾನವಾಗಿ ಸ್ವೀಕರಿಸುತ್ತೇವೆ ಎಂಬ ತಾತ್ವಿಕ ದೃಷ್ಟಿಯಲ್ಲಿ ಸೇವಿಸುವುದಾಗಿದೆ. 

ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮಂತ್ರ

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್

ನೂರು ವರ್ಷಆಯುಸ್ಸು, ವಜ್ರದಂತೆ ಧೃಢವಾದ ಶರೀರ, ಸರ್ವಸಂಪತ್ತು ಸರ್ವರಿಷ್ಟನಾಶ ಇವುಗಳಿಗಾಗಿ ಯುಗಾದಿಯಂದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು ನಂತರ ಪಂಚಾಂಗ ಶ್ರವಣಮಾಡಬೇಕು.

ಇದಾದ ಬಳಿಕ ಮನೆಯ ಹಿರಿಯ ಮಹಿಳೆ ಕಿರಿಯರೆಲ್ಲರಿಗೂ ಕುಂಕುಮಾರತಿ ಎತ್ತುವ ಪದ್ಧತಿ ರೂಢಿಯಲ್ಲಿದೆ. ಯುಗಾದಿ ದಿನದಂದು ಕರಗಿಸಿದ ತುಪ್ಪವನ್ನು ಒಂದು ಬೌಲ್ ನಲ್ಲಿ ಎಲ್ಲರೂ ಹಾಕಿ ಮುಖ ನೋಡಿಕೊಳ್ಳುವ ಅಭ್ಯಾಸವೂ ಇದೆ. ಮನೆ ಮಂದಿಯೆಲ್ಲ ಈ ದಿನ ದೇವಸ್ಥಾನಕ್ಕೆ ಹೋಗಿ ವರ್ಷದ ಒಳಿತಿಗೆ ಬೇಡಬೇಕು. ಇದಾದ ಬಳಿಕ ವಿಶೇಷ ಹಬ್ಬದ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಮನೆಯವರೆಲ್ಲ ಸೇವಿಸಬೇಕು. 

ಯಾವುದೇ ಹೊಸ ಯೋಜನೆ ಪ್ರಾರಂಭಿಸುವುದಿದ್ದರೂ, ಒಳ್ಳೆಯ ಕಾರ್ಯಗಳಿದ್ದರೂ ಅದನ್ನು ಯುಗಾದಿ ಹಬ್ಬದ ಶುಭ ದಿನದಂದು ಆರಂಭಿಸುವುದರಿಂದ ಎಲ್ಲ ಒಳಿತಾಗುತ್ತದೆ, ಯೋಜನೆ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ, ನಿಮ್ಮ ಯಾವುದೇ ಮಹತ್ತರ ಕಾರ್ಯಗಳಿದ್ದರೂ ಅದನ್ನು ಯುಗಾದಿಯಂದೇ ಆರಂಭಿಸಿ. ಇದು ಯುಗಾದಿ ಹಬ್ಬದ ಆಚರಣೆ ಯಾಕೆ ಮತ್ತು ಹೇಗೆ ಮಾಡಬೇಕು ಎಂಬುದರ ಕುರಿತಾದ ಪುಟ್ಟ ಮಾಹಿತಿ.

Spread the love

Related Articles

Leave a Reply

Your email address will not be published. Required fields are marked *

Back to top button