ಕೇರಳ ಸಿಎಂ ವಿರುದ್ಧ ರಾಷ್ಟ್ರಪತಿ,ಪ್ರಧಾನಿಗೆ ರಾಜ್ಯಪಾಲರ ದೂರು

ತಿರುವನಂತಪುರ: ಕೇರಳ ಸಿಎಂ ಪಿಣರಾಯಿ ವಿಜಯನ್ ಇತ್ತೀಚೆಗೆ ಕೈಗೊಂಡ ವಿದೇಶ ಪ್ರವಾಸದ ವಿವರಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗಳಿಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕಳುಹಿಸಿ ಕೊಟ್ಟಿದ್ದಾರೆ.
ಹತ್ತು ದಿನಗಳ ಕಾಲ ಸಿಎಂ ವಿಜಯನ್ ಯುಇಎ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿದ್ದ ವೇಳೆ, ತಮಗೆ ಮಾಹಿತಿಯನ್ನೇ ನೀಡಲಿಲ್ಲ. ದೈನಂದಿನ ಆಡಳಿತ ವ್ಯವಸ್ಥೆ ಹೇಗೆ ನಡೆ ಯಲಿದೆ ಎಂಬಿತ್ಯಾದಿ ಮಾಹಿತಿಯನ್ನೇ ಮುಖ್ಯ ಮಂತ್ರಿ ನೀಡಿರಲಿಲ್ಲ ಎಂದೂ ಆರೋಪಿಸಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಯವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮತ್ತೊಂದು ಬೆಳವಣಿಗೆ ಯಲ್ಲಿ ತಿರುವನಂತಪುರದಲ್ಲಿ ಇರುವ ಎ.ಪಿ.ಜೆ.ಅಬ್ದುಲ್ ಕಲಾಂ ತಾಂತ್ರಿಕ ವಿವಿಯ ಕುಲಪತಿ ಸ್ಥಾನಕ್ಕೆ ಕೇರಳದ ಎಲ್ಡಿಎಫ್ ಸರಕಾರ ಶಿಫಾರಸು ಮಾಡಿದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇಶಿತಾ ರಾಯ್ ಅವರ ನೇಮಕಕ್ಕೆ ರಾಜ್ಯಪಾಲ ಮತ್ತು ಕುಲಪತಿ ಆರಿಫ್ ಮೊಹಮ್ಮದ್ ಖಾನ್ ತಡೆಯೊಡ್ಡಿದ್ದಾರೆ. ಜತೆಗೆ ಪ್ರಭಾರ ಕುಲಪತಿ ಯನ್ನಾಗಿ ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ| ಶಿಶಾ ಥಾಮಸ್ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಆದರೆ ಡಾ| ಥಾಮಸ್ ವಿವಿ ಕ್ಯಾಂಪಸ್ಗೆ ಪ್ರವೇಶ ಮಾಡಿ, ಅಧಿಕಾರ ಸ್ವೀಕರಿಸುವುದಕ್ಕೆ ಸ್ಟೂಡೆಂಟ್ ಫೆಡ ರೇಶನ್ ಆಫ್ ಇಂಡಿಯಾ ಮತ್ತು ಎಡಪಕ್ಷಗಳ ಬೆಂಬಲಿತ ಸಂಘಟನೆಗಳ ಸದಸ್ಯರು ಪ್ರತಿರೋಧ ಒಡ್ಡಿದ್ದಾರೆ. ಈ ಘಟನೆಯಿಂದ ತಮಗೆ ಆಘಾತ ವಾಗಿದೆ ಎಂದು ಡಾ| ಶಿಶಾ ಥಾಮಸ್ ಹೇಳಿದ್ದಾರೆ.
