ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕತೆಗೆ ಧಕ್ಕೆ: ಕುಮಾರಸ್ವಾಮಿ

ರಾಮನಗರ: ಕೇರಳದ ಗಡಿಯಲ್ಲಿನ ಊರುಗಳಿಗೆ ಕನ್ನಡದ ಹೆಸರು ಬದಲಾವಣೆ ಹಿನ್ನಲೆಯಲ್ಲಿ ಬಗ್ಗೆ ಅಲ್ಲಿನ ಸಿಎಂ ಗೆ ನಮ್ಮ ಸಿಎಂ ಪತ್ರ ಬರೆದಿದ್ದಾರೆ ಎಂದು ಮಾಜಿ ಮುಖ್ಯಮತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ನಾನು ಸಹ ಈ ಬಗ್ಗೆ ಟ್ವೀಟ್ ಮೂಲಕ ಗಮನ ಸೆಳೆದಿದ್ದೇನೆ ಪತ್ರವನ್ನು ಬರೆದಿದ್ದೇನೆ. ಕೇರಳ ಸರಕಾರ ಕೂಡ ಆ ರೀತಿಯ ಬೆಳವಣಿಗೆ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ ಇಂತಹ ವಿಚಾರಗಳು ಬಂದಾಗ ರಾಜ್ಯ ಸರ್ಕಾರ ನಾಡಿನ, ಜಲದ ವಿಚಾರದಲ್ಲಿ ಎಚ್ಚರಿಕೆಯಿಂದ ಇಂತಹ ವಿಚಾರಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕೆಂದರು.
ಅಲ್ಲಿನ ಮಂಜೇಶ್ವರ ಶಾಸಕ ಅಶ್ರಫ್ ರವರು ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಕನ್ನಡದ ವಿಚಾರವಾಗಿ ಅವರು ಗೌರವ ಮೆರೆದಿದ್ದಾರೆ. ಆದರೆ ನಮ್ಮ ರಾಜ್ಯದ ಜನಪ್ರತಿನಿಧಿಗಳು ಮಾತ್ರ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷ ರಾಜ್ಯದ ಅಧಿಕೃತ ವಿರೋಧ ಪಕ್ಷ ಆದರೆ ಆ ಪಕ್ಷದ ನಾಯಕರು ಮಾತ್ರ ಕಾಸರಗೋಡು ವಿಚಾರವಾಗಿ ಚಕಾರ ಎತ್ತುತ್ತಿಲ್ಲವೆಂದು ಆರೋಪಿಸಿದರು.
ಆದರೆ ರಾಜ್ಯಕ್ಕೆ ಇಂತಹ ಪರಿಸ್ಥಿತಿ ಬರಲು ಕಾಂಗ್ರೆಸ್ – ಬಿಜೆಪಿ ರಾಷ್ಟ್ರೀಯ ಪಕ್ಷಗಳು ಕಾರಣವೆಂದು ಆರೋಪಿಸಿದ ಹೆಚ್ಡಿಕೆ, ತಮಿಳುನಾಡಿನ ಪ್ರಾದೇಶಿಕ ಪಕ್ಷಗಳು ರಾಜಕೀಯ ಮಾಡುತ್ತವೆ. ಆದರೆ ಅಲ್ಲಿನ ಜಲದ ವಿಚಾರ ಬಂದಾಗ ಎಲ್ಲರೂ ಒಂದಾಗುತ್ತಾರೆ ಎಂದರು.
ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಜನರು ತಿರಸ್ಕಾರ ಮಾಡುತ್ತಾರೆ. ನಮ್ಮಲ್ಲಿಯೂ ಸಹ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಈ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು.
ಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ನಿಲುವಿಗೆ ಬೆಂಬಲ ಕೊಡುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಈ ವಿಚಾರವಾಗಿ ರಾಷ್ಟ್ರೀಯ ಪಕ್ಷಗಳು ಬೆಂಬಲ ಕೊಡಲ್ಲ. ಹಾಗಾಗಿ ರಾಜ್ಯದ ಜನರು ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ಕೊಡಬೇಕಿದೆ. ಆಂತಹ ದಿನಗಳು ದೂರವಿಲ್ಲ, ಜನರು ಪ್ರಾದೇಶಿಕತೆಗೆ ಬೆಂಬಲ ಕೊಡುತ್ತಾರೆನ್ನುವ ನಂಬಿಕೆ ಇದೆ ಎಂದರು.
