ಸರ್ಕಾರ ಕೊಟ್ಟ ಮಾತಿನಂತೆ ನಡೆಯಬೇಕು, ಇಲ್ಲವಾದ್ರೆ ಮಾಡು ಇಲ್ಲವೇ ಮಡಿ ಹೋರಾಟ: ವಿಜಯಾನಂದ ಕಾಶಪ್ಪನವರ್

ಧಾರವಾಡ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಆರು ತಿಂಗಳೊಳಗೆ ನೀಡುವುದಾಗಿ ಸರ್ಕಾರ ಹೇಳಿತ್ತು. ಅದರಂತೆ ನಡೆದುಕೊಂಡರೆ ಎಲ್ಲರಿಗೂ ಸಂತೋಷ. ಒಂದು ವೇಳೆ ಮಾತಿನಂತೆ ನಡೆಯದಿದ್ದರೆ ಆಕ್ಟೋಬರ್ 1 ರಿಂದ ಮಾಡು ಇಲ್ಲವೇ ಮಡಿ ಹೋರಾಟವನ್ನು ಸಮಾಜದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಆರಂಭಿಸುತ್ತೇವೆ ಎಂದು ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ದುಂಡುಮೇಜಿನ ಸಭೆ ಬಳಿಕ ಮಾತನಾಡಿದ ಅವರು, ಈ ಹಿಂದೆ ಬಿ ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ, ಸಮಾಜದ ಮುಖಂಡರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಸವಾಲಿಗೆ ಆರು ತಿಂಗಳ ಸಮಯಾವಕಾಶ ಕೇಳಿದರು. ಅದೂ ಈಗ ಹತ್ತಿರ ಬರುತ್ತಿದೆ. ಅಂದು 10 ಲಕ್ಷ ಜನ ಸೇರಿ ಸಮಾವೇಶ ಮಾಡಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. ಒಂದು ವೇಳೆ ಸರ್ಕಾರ ಸಮಾಜದ 2 ಮೀಸಲಾತಿ ಮಾತು ತಪ್ಪಿದ್ದರೆ, ಮುಂದಿನ ದಿನಗಳಲ್ಲಿ 20 ಲಕ್ಷ ಜನ ಸೇರಿ ಸಮಾವೇಶ ಮಾಡುತ್ತೆವೆ. ರಾಜ್ಯ ಸರ್ಕಾರವನ್ನ ಎಚ್ಚರಿಸುತ್ತೇವೆ. ಈ ಭಾರಿ ಮಾಡು ಇಲ್ಲವೇ ಮಡಿ ಎನ್ನುವ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮೀಸಲಾತಿ ಹೋರಾಟ ಯಾವತ್ತೂ ನಿಲ್ಲುವುದಿಲ್ಲ : ಮೃತ್ಯುಂಜಯ ಸ್ವಾಮೀಜಿ.
ಮೀಸಲಾತಿ ಹೋರಾಟ ಯಾವತ್ತೂ ನಿಲ್ಲುವುದಿಲ್ಲ. ನಮ್ಮ ಉದ್ದೇಶ ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕು. ನಮ್ಮ ಹೋರಾಟ ಶಾಸಕರನ್ನ ಮಾಡುವುದು, ಸಚಿವರನ್ನ ಮಾಡುವುದು, ಸಿಎಂ ಮಾಡುವುದು ನಮ್ಮ ಉದ್ದೇಶವಲ್ಲ. ಎಷ್ಟೇ ಪೀಠಗಳು ಹುಟ್ಟಿದ್ರು ನಮ್ಮ ಕೂಡಲ ಸಂಗಮ ಪೀಠ ಮುಖ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸಿ ಕೊಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದ ಸ್ವಾಮೀಜಿಗಳು ದುಂಡು ಮೇಜಿನ ಸಭೆಯಲ್ಲಿ ಕೈಗೊಂಡ 5 ನಿರ್ಣಯಗಳನ್ನು ತಿಳಿಸಿದರು.
ಪಂಚ ನಿರ್ಣಯಗಳು
ಹುಬ್ಬಳ್ಳಿಯಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟದ ದುಂಡು ಮೇಜಿನ ಸಭೆಯಲ್ಲಿ ತಗೆದುಕೊಂಡ ಐದು ನಿರ್ಣಯಗಳನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜುಗಳು ಮಂಡಿಸಿದರು.
1. ಪಾದಯಾತ್ರೆಯ ಯಶಸ್ವಿಗೆ ಸಹಕರಿಸಿದ್ದ ಸಿಎಂ ಬಸರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು
2. ಸರ್ಕಾರ ನುಡಿದಂತೆ ನಡೆಯಲು ಅಗಸ್ಟ್ 26 ರಿಂದ ಸೆಪ್ಟೆಂಬರ್ 30 ರವರೆಗೆ, ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಎಂಬ ದ್ಯೇಯದೊಂದಿಗೆ ರಾಜ್ಯದ ಎಲ್ಲಾ ತಾಲೂಕಿನಲ್ಲಿ ಅಭಿಯಾನ , ಮಲೈ ಮಹದೇಶ್ವರ ಬೆಟ್ಟದಿಂದ ಅಭಿಯಾನ.
3. ಸರ್ಕಾರ ಕೊಟ್ಟ ಭರವಸೆಯಂತೆ ನಡೆದುಕೊಳ್ಳದಿದ್ದರೆ ಅಕ್ಟೋಬರ್ 1 ರಿಂದ ಬೆಂಗಳೂರಿನ ಪ್ರೀಡಂ ಪಾಕ್೯ ನಲ್ಲಿ ಧರಣಿ ಸತ್ಯಾಗ್ರಹ
4. ಕುರುಬ, ವಾಲ್ಮಿಕಿ, ಮಡಿವಾಳ, ಗಂಗಾಮತ, ಆದಿಬಣಜಿಗ, ಕುಡುಒಕ್ಕಲಿಗ ಸಮಾಜದ ಬೇಡಿಕೆ ಈಡೇರಿಸುವಂತೆ ಬೆಂಬಲ
5. ಸರ್ಕಾರದ ಜೊತೆ ಸಂಧಾನಕಾರರಾಗಿ ಮಾತುಕತೆ ನಡೆಸುವಂತೆ ಸಚಿವ ಸಿ ಸಿ ಪಾಟೀಲ್ ಗೆ ಜವಾಬ್ದಾರಿ
