ಪಾಕ್ ಪ್ರಧಾನಿ ಸೇರಿದಂತೆ ಮೂವರ ಆಣತಿಯಂತೆ ಗುಂಡಿನ ದಾಳಿ: ಇಮ್ರಾನ್ ಖಾನ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ ಸಂಬಂಧ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷವು ಪಾಕ್ ಪ್ರಧಾನಿ ಸೇರಿದಂತೆ ಮೂವರ ಮೇಲೆ ಅನುಮಾನ ವ್ಯಕ್ತಪಡಿಸಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್, ರಾಣಾ ಸನಾವುಲ್ಲಾ ಮತ್ತು ಮೇಜರ್ ಜನರಲ್ ಫೈಸಲ್ ವ್ಯಕ್ತಿಗಳ ಆಜ್ಞೆಯ ಮೇರೆಗೆ ಈ ಕೃತ್ಯ ಎಸಗಿದ್ದಾರೆ ಎಂದು ಇಮ್ರಾನ್ ಖಾನ್ ನಂಬುತ್ತಾರೆ. ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಅದರ ಆಧಾರದ ಮೇಲೆ ಇದನ್ನು ಹೇಳುತ್ತಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ನಾಯಕರಾದ ಅಸಾದ್ ಉಮರ್ ಮತ್ತು ಮಿಯಾನ್ ಅಸ್ಲಾಮ್ ಇಕ್ಬಾಲ್ ಹೇಳಿದ್ದಾರೆ.
ರಾಣಾ ಸನಾವುಲ್ಲಾ ಪಾಕಿಸ್ತಾನದ ಆಂತರಿಕ ಸಚಿವರಾಗಿದ್ದಾರೆ ಮತ್ತು ಮೇಜರ್ ಜನರಲ್ ಫೈಸಲ್ ನಾಸೀರ್ ಅವರು ಐಎಸ್ಐ ಮಹಾನಿರ್ದೇಶಕ (ಸಿ) ಆಗಿದ್ದಾರೆ. ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪಿಟಿಐ ನಾಯಕರು ಹೇಳಿದ್ದಾರೆ.
ಪಕ್ಷವು ಪೋಸ್ಟ್ ಮಾಡಿದ ವಿಡಿಯೋದಲ್ಲಿ ಪಿಟಿಐ ಪ್ರಧಾನ ಕಾರ್ಯದರ್ಶಿಯಾಗಿರುವ ಅಸಾದ್ ಉಮರ್ ಅವರು ಶಂಕಿತ ಮೂವರನ್ನು ಹುದ್ದೆಗಳಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ. “ಇಮ್ರಾನ್ ಖಾನ್ ಅಪಾಯದಲ್ಲಿದ್ದಾರೆ ಎಂದು ನಮಗೆ ವರದಿಗಳು ಬರುತ್ತಿರುವುದರಿಂದ ನಾನು ಇಮ್ರಾನ್ ಖಾನ್ ಅವರೊಂದಿಗೆ ಮಾತನಾಡಿದ್ದೇನೆ. ಆದಾಗ್ಯೂ, ನಾವು ಇದನ್ನು ಅಲ್ಲಾಹನಿಗೆ ಬಿಡಬೇಕು ಎಂದು ಅವರು ಹೇಳಿದರು. ಇಮ್ರಾನ್ ಖಾನ್ ಅವರ ಅನುಮತಿಗಾಗಿ ನಾವು ಕಾಯುತ್ತಿದ್ದೇವೆ. ಮೂವರನ್ನು ಹುದ್ದೆಯಿಂದ ತೆಗೆದುಹಾಕದಿದ್ದರೆ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗುವುದು” ಎಂದರು. ಹೇಳಿದರು.
ಪಿಟಿಐನ ಲಾಂಗ್ ಮಾರ್ಚ್ನಲ್ಲಿ ಗುಂಡಿನ ದಾಳಿ ನಡೆಸಿದ್ದಕ್ಕಾಗಿ ಪಾಕಿಸ್ತಾನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಶಂಕಿತ ಆರೋಪಿ, “ಸಾರ್ವಜನಿಕರನ್ನು ದಾರಿತಪ್ಪಿಸುತ್ತಿದ್ದ ಕಾರಣ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕೊಲ್ಲಲು ಬಯಸಿದ್ದೆ” ಎಂದಿದ್ದನು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಜೀರಾಬಾದ್ನಲ್ಲಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ವಿರುದ್ಧ ಲಾಂಗ್ ಮಾರ್ಚ್ ನಡೆಸುತ್ತಿದ್ದಾಗ ಇಮ್ರಾನ್ ಖಾನ್ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಇಮ್ರಾನ್ ಖಾನ್ ಗಾಯಗೊಂಡಿದ್ದರು.
ಪಾಕಿಸ್ತಾನದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ. ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಅಲ್ಲದೆ ಮಾಜಿ ಪ್ರಧಾನಿ ಮೇಲಿನ ದಾಳಿಯನ್ನು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯ ಕೂಡ ಖಂಡಿಸಿದೆ.
