ಮಾಜಿ ಸಚಿವ ಯು.ಟಿ.ಖಾದರ್ ಗೆ ಕಾಂಗ್ರೆಸ್ ಉಪನಾಯಕನ ಸ್ಥಾನಮಾನ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಕಾಂಗ್ರೆಸ್ ಪಕ್ಷದ ಉಪನಾಯಕರಾಗಿ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಅವರನ್ನು ನೇಮಿಸಿ ಏಐಸಿಸಿ ಆದೇಶ ಹೊರಡಿಸಿದೆ. ಮಾಧ್ಯಮ ಹೇಳಿಕೆ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಈ ವಿಷಯ ತಿಳಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ಸಂಬಂಧ ಮುಗಿದ ಅಧ್ಯಾಯ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಮಾಜಿ ಸಚಿವ ಯು.ಟಿ.ಖಾದರ್ ಅವರಿಗೆ ಕಾಂಗ್ರೆಸ್ ಪ್ರಾಶಸ್ತ್ಯ ನೀಡಿ ತತ್ತಕ್ಷಣದಿಂದಲೇ ಜಾರಿಗೊ ಬರುವಂತೆ ಆದೇಶ ಹೊರಡಿಸಿದೆ.

ಇಬ್ರಾಹಿಂ ಅವರು ಹಿರಿಯ ನೇತಾರನಾಗಿದ್ದು ತಮ್ಮ ವಿಶಿಷ್ಠ ವಾಕ್ ಚಾತುರ್ಯದಿಂದ ಜನ ಸಮೂಹವನ್ನು ಆಕರ್ಷಿಸುವ ನಾಯಕ. ಆದರೆ, ಮಾಜಿ ಸಚಿವ ಯು.ಟಿ.ಖಾದರ್ ಇಬ್ರಾಹಿಂ ನಷ್ಟು ಜನಪ್ರಿಯ ನಾಯಕನಲ್ಲದಿದ್ದರೂ ಯುವ ನೇತಾರನಿಗೆ ಕಾಂಗ್ರೆಸ್ ಆದ್ಯತೆ ನೀಡುವ ಮೂಲಕ ಸಂದೇಶ ನೀಡಿದೆ.
ಇಬ್ರಾಹಿಂ ಅವರು ರಾಜ್ಯ ವಿಧಾನಪರಿಷತ್ ನ ಪ್ರತಿಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ ಆ ಸ್ಥಾನ ಏಐಸಿಸಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ರಾಜ್ಯ ರಾಜಕಾರಣಕ್ಕೆ ಮರಳಿದ ಬಿ.ಕೆ.ಹರಿಪ್ರಸಾದ್ ಅವರಿಗೆ ದಕ್ಕಿದ ಮೇಲೆ, ನಿರಾಶರಾದ ಇಬ್ರಾಹಿಂ ಪಕ್ಷ ತೊರೆಯವ ಇಂಗಿತವನ್ನು ಬಹಿರಂಗವಾಗಿಯೇ ನೀಡಿದ್ದರು.
ಅಲ್ಪಸಂಖ್ಯಾತರಿಗೆ ಸ್ಥಾನಮಾನ ನೀಡಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಯು.ಟಿ.ಖಾದರ್ ಅವರಿಗೆ ವಿಧಾನಭೆ ಶಾಸಕಾಂಗ ಪಕ್ಷದ ಉಪನಾಯಕನ ಸ್ಥಾನ ದಯಪಾಲಿಸಲಾಗಿದೆ.
