ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್!

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಪರಿಷ್ಕೃತ ವಿದ್ಯುತ್ ದರ ಅನ್ವಯವಾಗುತ್ತಿದ್ದು, ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬಿಸಿ ತಟ್ಟಲಿದೆ.
ಎಸ್ಕಾಂಗಳು ಸಲ್ಲಿಸಿದ್ದ ಮನವಿಯ ಮೇರೆಗೆ ಪ್ರತಿ ಯೂನಿಟ್ ಮೇಲೆ 23-43 ಪೈಸೆವರೆಗೆ ಹೆಚ್ಚಿಸಿ KERC ಆದೇಶ ಹೊರಡಿಸಿದೆ. ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಸಿ ಎಂದು ಇಂಧನ ಇಲಾಖೆ ಗ್ರಾಹಕರಿಗೆ ಹೊರೆ ಮಾಡಿದೆ. ಏಪ್ರಿಲ್, ಜುಲೈ ಆಯ್ತು ಇಂದಿನಿಂದಲೂ ಹೆಚ್ಚುವರಿ ವಿದ್ಯುತ್ ದರ ಪರಿಷ್ಕರಣೆ ಆಗಲಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 24 ಪೈಸೆ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕು. ಸೆಸ್ಕಾಂ ಅಡಿಯಲ್ಲಿ ಬರುವ ವಿದ್ಯುತ್ ಗ್ರಾಹಕರಿಗೆ ಹೆಚ್ಚುವರಿ 35 ಪೈಸೆ ಏರಿಕೆ ಮಾಡಲಾಗಿದೆ.
ಹೆಸ್ಕಾಂ ಹಾಗೂ ಜೆಸ್ಕಾಂ ಅಡಿಯ ವಿದ್ಯುತ್ ಗ್ರಾಹಕರು ಪ್ರತಿ ಯೂನಿಟ್ಗೆ 35 ಪೈಸೆ ಹೆಚ್ಚುವರಿ ವಿದ್ಯುತ್ ಶುಲ್ಕ ಕಟ್ಟಬೇಕು. ವಿದ್ಯುತ್ ಸರಬರಾಜು ಕಂಪನಿಗಳ ನಷ್ಟ ಸರಿದೂಗಿಸಲು ದರ ಏರಿಕೆ ಮಾಡಿದ್ದು, ವಿದ್ಯುತ್ ಸರಬರಾಜು ಕಂಪನಿಗಳಿಂದ ಇಂದಿನಿಂದ ಹೊಸ ವಿದ್ಯುತ್ ದರ ಜಾರಿಗೆ ಬರಲಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಬೇಕು. ಹಾಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ವಿದ್ಯುತ್ ದರ ಬಗ್ಗೆ ಒಮ್ಮೆ ಹೆಚ್ಚಾದ್ದಾರೆ ಮತ್ತೊಮ್ಮೆ ದರ ಕಡಿಮೆಯಾಗಲಿದೆ. ನಮ್ಮ ಸರ್ಕಾರ ಬಂದಾಗಲಾಗಲಿ ಅಥವಾ ನಾನು ಸಚಿವನಾದ ಮೇಲೆ ಈ ನೀತಿ ಜಾರಿಗೆ ಬಂದಿಲ್ಲ. ಕಳೆದ 7 ವರ್ಷಗಳಿಂದ ಈ ಪರಿಷ್ಕರಣೆ ನಡೆಯುತ್ತಲೇ ಇದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದರು.
