ದಿವ್ಯಾ ಹಾಗರಗಿ ಬಂಧನ ಯಾವಾಗ..? ಪ್ರಭಾವಿಗಳ ಶ್ರೀರಕ್ಷೆಯಲ್ಲಿದ್ದಾರಾ ಡೀಲ್ ದಿವ್ಯಾ?

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾದ ಬಿಜೆಪಿ ಮಹಿಳಾ ಘಟಕದ ಮಾಜಿ ನಾಯಕಿ ದಿವ್ಯಾ ಹಾಗರಗಿ ಬಂಧನ ಯಾವಾಗ? ಅನ್ನೋ ಪ್ರಶ್ನೆ ಉದ್ಭವಿಸಿದೆ. ದಿವ್ಯಾ ತಲೆ ಮರೆಸಿಕೊಂಡು 14 ದಿನ ಕಳೆದರು ಇನ್ನೂ ಪತ್ತೆ ಆಗದಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಈ ನಡುವೆ ದಿವ್ಯಾ ಬಂಧನಕ್ಕೆ ಸಿಐಡಿ ಆರು ವಿಶೇಷ ತಂಡ ರಚಿಸಿ ಜಾಲ ಬೀಸಿದೆ.
ಪಿಎಸ್ಐ ನೇಮಕಾತಿ ಅಕ್ರಮದ ಕೇಂದ್ರ ಸ್ಥಾನವಾದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ, ಪರೀಕ್ಷಾ ಅಕ್ರಮದ ರೂವಾರಿ ಎನ್ನಲಾಗುತ್ತಿರುವ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿ, ಶಾಲೆಯ ಹೆಡ್ಮಾಸ್ಟರ್ ಕಾಶಿನಾಥ್ ಸೇರಿ ಐವರು ತಲೆ ಮರೆಸಿಕೊಂಡು ಇಂದಿಗೆ 14 ದಿನಗಳು ಕಳೆದವು. ಸಿಐಡಿ ಎಷ್ಟೇ ಶೋಧ ನಡೆಸಿದ್ರು ಐವರಲ್ಲಿ ಯಾರು ಪತ್ತೆಯಾಗಿಲ್ಲ, ರಾಜ್ಯದ ಪ್ರಭಾವಿ ಮುಖಂಡರು ದಿವ್ಯಾಳ ರಕ್ಷಣೆಗೆ ನಿಂತಿದ್ದಾರಾ? ಅವರ ಶ್ರೀರಕ್ಷೆಯಿಂದ ದಿವ್ಯಾ ಬಂಧನ ಆಗ್ತಿಲ್ವಾ? ಎಂಬ ಚರ್ಚೆ ಜೋರಾಗಿ ನಡೆದಿವೆ. ದಿವ್ಯಾ ಪತಿ ರಾಜೇಶ ಹಾಗರಗಿ, ಕಾಂಗ್ರೆಸ್ ಮಾಜಿ ನಾಯಕ ಮಹಾಂತೇಶ ಪಾಟೀಲ್, ರುದ್ರಗೌಡ ಪಾಟೀಲ್ ಸೇರಿ ಅನೇಕರನ್ನು ಪತ್ತೆ ಮಾಡಿ ಬಂಧಿಸಿದ ಸಿಐಡಿಗೆ ದಿವ್ಯಾಳನ್ನು ಪತ್ತೆ ಮಾಡುವುದು ಇಷ್ಟ್ಯಾಕೆ ಕಷ್ಟವಾಗ್ತಿದೆ. ಕಾಣದ ಕೈಗಳು ಈ ವಿಷಯದಲ್ಲಿ ಕೈ ಆಡಿಸ್ತಿವೆಯಾ? ಅನ್ನೋ ಶಂಕೆ ಜನಮಾನಸದಲ್ಲಿ ಮೂಡಿದೆ.

ಇನ್ನು ಅಜ್ಞಾತ ಸ್ಥಳದಿಂದಲೇ ದಿವ್ಯಾ ಮತ್ತು ಸಹಚರರು ತಮ್ಮ ವಕೀಲರ ಮುಖೇನ ಜಿಲ್ಲಾ ನ್ಯಾಯಾಲಯಕ್ಕೆ ನೀರಿಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ನಿರೀಕ್ಷಣಾ ಜಾಮೀನು ಸಲ್ಲಿಸುವಷ್ಟು ಸಂಪರ್ಕದಲ್ಲಿರುವ ದಿವ್ಯಾ ಸಿಐಡಿ ಕೈಗೆ ಮಾತ್ರ ಸಿಗುತ್ತಿಲ್ಲ ಯಾಕೆ..? ಅಂತ ಕಾಂಗ್ರೆಸ್ ನಾಯಕರು ಕೆಂಡಕಾರುತ್ತಿದ್ದಾರೆ. ಈ ಮದ್ಯೆ ದಿವ್ಯಾ ಮತ್ತು ಸಹಚರರಿಗೆ ನಿರೀಕ್ಷಣಾ ಜಾಮೀನು ನೀಡದಂತೆ ಸಿಐಡಿ ಪೊಲೀಸರು ನ್ಯಾಯಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ದಿವ್ಯಾಗೆ ನಿರೀಕ್ಷಣಾ ಜಾಮೀನು ಸಿಗೋದು ಡೌಟ್ ಇದೆ. ಜಿಲ್ಲಾ ನ್ಯಾಯಾಲಯ ಅರ್ಜಿ ತೀರಸ್ಕರಿಸಿದ್ರೆ ದಿವ್ಯಾ ಆಂಡ್ ಟಿಂ ಸಿಐಡಿಗೆ ಶರಣಾಗುವುದು ಬಿಟ್ಟರೆ ಬೇರೆ ದಾರಿಯಿಲ್ಲ, ಹೀಗಿದ್ರು ದಿವ್ಯಾ ಇನ್ನೂ ಪತ್ತೆ ಆಗಿಲ್ಲದಿರುವುದು ಸಿಐಡಿಗೆ ತಲೆ ನೋವಾಗಿ ಕಾಡುತ್ತಿದೆ.
ಸಿಐಡಿ ಆರು ಪ್ರತ್ಯೇಕ ತಂಡ ರಚನೆ
ದಿವ್ಯಾ ಮತ್ತು ಸಹಚರರ ಬಂಧನಕ್ಕೆ ಸಿಐಡಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಡಿಜಿಪಿ, ಎಸ್ಪಿ ಕಲಬುರಗಿಯಲ್ಲಿ ಬಿಡಾರ ಹೂಡಿ ಬಂಧನಕ್ಕೆ ಆರು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ. ಹಗಲಿರುಳು ಎನ್ನದೆ ದಿವ್ಯಾಗಾಗಿ ಆರು ತಂಡಗಳು ಬಲೆ ಬೀಸಿವೆ. ಇಷ್ಟರಲ್ಲೆ ದಿವ್ಯಾ ಆಂಡ್ ಟೀಂ ಬಂಧನ ಮಾಡ್ತೀವಿ ಎಂಬ ಆತ್ಮವಿಶ್ವಾದಲ್ಲಿ ಸಿಐಡಿ ತಂಡ ಕಾರ್ಯನಿರ್ವಹಿಸುತ್ತಿದೆ.
