ಕಾರವಾರ ನೌಕಾನೆಲೆಗೆ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್

ಕಾರವಾರ: ಏಷ್ಯಾದಲ್ಲಿಯೇ ಅತಿದೊಡ್ಡ ನೌಕಾನೆಲೆಯಾಗಿರುವ ತಾಲೂಕಿನ ಐಎನ್ಎಸ್ ಕದಂಬಕ್ಕೆ ಇಂದು (ಜೂ.24) ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ. ಇಂದು ಮಧ್ಯಾಹ್ನ ಗೋವಾದಿಂದ ಹೆಲಿಕಾಪ್ಟರ್ ಮೂಲಕ ನೌಕಾನೆಲೆಗೆ ಬಂದಿಳಿಯಲಿದ್ದಾರೆ.
ಕದಂಬ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು,ಈ ಹಿನ್ನೆಲೆಯಲ್ಲಿ ಕಾಮಗಾರಿಗಳ ವೀಕ್ಷಣೆಗೆ ರಾಜನಾಥ್ ಸಿಂಗ್ ಆಗಮಿಸುತ್ತಿದ್ದಾರೆ. ಇದೇ ವೇಳೆ ನೌಕಾನೆಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಜಟ್ಟಿಯೊಂದನ್ನು ಅವರು ಉದ್ಭಾಟಿಸಲಿದ್ದಾರೆ.
ಮಧ್ಯಾಹ್ನ ದೆಹಲಿಯಿಂದ ಗೋವಾಕ್ಕೆ ರಾಜನಾಥ್ ಸಿಂಗ್ ಆಗಮಿಸಲಿದ್ದು, ಅಲ್ಲಿಂದ 1.30 ಕ್ಕೆ ಹೆಲಿಕಾಪ್ಟರ್ ಮೂಲಕ ನೌಕಾನೆಲೆಗೆ ಬಂದಿಳಿಯಲಿದ್ದಾರೆ. ಮೊದಲು ಜಟ್ಟಿ ಕಾಮಗಾರಿಯ ಉದ್ಭಾಟನೆ ನಡೆಸಿ ನಂತರ ಎರಡನೇ ಹಂತದ ವಿಸ್ತರಣೆ ಕಾಮಗಾರಿಗಳನ್ನು ವೀಕ್ಷಿಸಿ, ಅಧಿಕಾರಿಗಳ ಜೊತೆ ಈ ಸಂಬಂಧ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ರಕ್ಷಣಾ ಸಚಿವರಾದ ನಂತರ ಈ ಹಿಂದೆ ಒಮ್ಮೆ ನೌಕಾನೆಲೆಗೆ ರಾಜನಾಥ್ ಸಿಂಗ್ ಭೇಟಿ ನೀಡಿದ್ದರು. ಗೋವಾದಿಂದ ಹೆಲಿಕಾಪ್ಟರ್ ಮೂಲಕ ನೇರವಾಗಿ ಐಎನ್ಎಸ್ ವಿಕ್ರಮಾದಿತ್ಯ ಯುದ್ಧ ನೌಕೆಯ ಮೇಲೆ ಇಳಿದು ಅಲ್ಲಿಯೇ ಕಾರ್ಯಕ್ರಮ ಮುಗಿಸಿ ವಾಪಸ್ ತೆರಳಿದ್ದರು.
