ಮಾಜಿ ಸಚಿವ ವಿನಯ ಕುಲಕರ್ಣಿಗೆ ಬಿಗ್ ರಿಲೀಫ್ : ಸಾಕ್ಷಿ ನಾಶ ಪ್ರಕರಣದಲ್ಲೂ ಜಾಮೀನು ಮಂಜೂರು

ಧಾರವಾಡ : ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳಿಂದ ಬಂಧನವಾಗಿ ಜೈಲು ಪಾಲಾಗಿದ್ದ, ಮಾಜಿ ಸಚಿವ ವಿನಯ ಕುಲಕರ್ಣಿಗೆ ಮತ್ತೊಂದು ಪ್ರಕರಣದಲ್ಲಿ ಇಂದು ಜಾಮೀನು ಮಂಜೂರಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಸಾಕ್ಷಿ ನಾಶ ಪ್ರಕರಣದಲ್ಲೂ ಈಗ ಜಾಮೀನು ದೊರಕ್ಕಿದೆ.
ಕೆಳೆದ ಅಗಸ್ಟ್ 11 ರಂದು ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ ಯೊಗೇಶಗೌಡ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತು. ನಂತರ ಕೊಲೆ ಪ್ರಕರಣದ ಸಾಕ್ಷಿ ನಾಶ ಪ್ರಕರಣದಲ್ಲಿ ವಿನಯ ಕುಲಕರ್ಣಿಯವರಿಗೆ ಜಾಮೀನು ದೊರೆಯುವುದು ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರು ವಿನಯ ಅವರು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕಾಲಕಳೆಯ ಬೇಕಾಗಿತ್ತು. ಈಗ ಸಾಕ್ಷಿ ನಾಶ ಪ್ರಕರಣದಲ್ಲೂ ವಿನಯಗೆ ಜಾಮೀನು ದೊರೆತ್ತಿದ್ದು, 9 ತಿಂಗಳ ನಂತರ ವಿನಯ ಕುಲಕರ್ಣಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಒದಗಿ ಬಂದಿದೆ.
ಇದನ್ನೂ ಓದಿ : Vinay Kulkarni: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರು
ಕಳೆದ ನವಂಬರ್ 5 ರಂದು ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನು, ಧಾರವಾಡ ಬಾರಾಕೋಟ್ರಿ ಮನೆಯಿಂದ ಬಂಧನ ಮಾಡಿ ಧಾರವಾಡ ಉಪನಗರ ಠಾಣೆಗೆ ಕರೆದುಕೊಂಡು ಬಂದಿದ್ದರು. ಬಳಿಕ ಹಲವು ಗಂಟೆಗಳ ಕಾಲ ಅಂದು ಠಾಣೆಯಲ್ಲಿ ವಿಚಾರಣೆ ನಡೆಸಿದ ರಾಕೇಶ್ ರಂಜನ್ ನೇತೃತ್ವದ ಸಿಬಿಐ ತಂಡ, ಸಂಜೆ ವೇಳೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕೋವಿಡ್ ಟೆಸ್ಟ್ ಮಾಡಿಸಿ ಬಳಿಕ ನ್ಯಾಯಾಧೀಶರು ಮುಂದೆ ಹಾಜರು ಪಡಿಸಿದರು.
ಸಿಬಿಐ ವಿಚಾರಣೆ ಬಳಿಕ ಅಂದಿನಿಂದ ಒಂಬತ್ತು ತಿಂಗಳ ಕಾಲ ವಿನಯವರನ್ನು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇಡಲಾಗಿತ್ತು. ಈಗ ಎರಡು ಪ್ರಕರಣದಲ್ಲಿ ಜಾಮೀನು ಮಂಜೂರಾಗಿದ್ದು ಈಗ ವಿನಯವರಿಗೆ ಬಿಡುಗಡೆ ಭಾಗ್ಯ ಒದಗಿ ಬಂದಿದ್ದು, ವಿನಯವರ ಬೆಂಬಲಿಗರಲ್ಲಿ ಸಂತಸ ಮನೆ ಮಾಡಿದೆ.
