ಏಷ್ಯಾದ ಅತಿದೊಡ್ಡ ಎಪಿಎಂಸಿಯ ಮಾಹದ್ವಾರ ಉದ್ಘಾಟಿಸಿದ ಸಿಎಂ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆಯ ಅಮರಗೋಳ ಬಳಿಯ ಜಗಜ್ಯೋತಿ ಬಸವೇಶ್ವರ ಎ.ಪಿ.ಎಂ.ಸಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಹಾದ್ವಾರ, ಜಾನುವಾರು ಮಾರುಕಟ್ಟೆ ಹಾಗೂ ಈರುಳ್ಳಿ ಸಂಗ್ರಹಣಾ ಗೋದಾಮು ಘಟಕವನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಇಂದು ಉದ್ಘಾಟಿಸಿದರು.
ಏಷ್ಯಾದ ಅತಿದೊಡ್ಡ ಎ.ಪಿ.ಎಂ.ಸಿ ಎಂಬ ಖ್ಯಾತಿ ಘಳಿಸಿರುವ ಹುಬ್ಬಳ್ಳಿಯ ಎ.ಪಿ.ಎಂ.ಸಿ ಗೆ ಸಾಮಾಜಿಕ ಸುಧಾರಕ ಜಗಜ್ಯೋತಿ ಬಸವೇಶ್ವರ ಅವರ ಹೆಸರಿಡಲಾಗಿದೆ. ಇದಕ್ಕೆ ತಕ್ಕಂತೆ ಮುಖ್ಯದ್ವಾರ ನಿರ್ಮಿಸಲಾಗಿದ್ದು, ಉತ್ತರ ಕರ್ನಾಟಕದ ರೈತ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಬಸವಣ್ಣ, ನೇಗಿಲು ಹೊತ್ತ ರೈತ, ಅಲಂಕೃತ ಜೋಡೆತ್ತುಗಳ ಕಾಂಕ್ರೀಟ್ ಮೂರ್ತಿಗಳು ಮಹಾದ್ವಾರದಲ್ಲಿ ಕಂಗೊಳಿಸುತ್ತಿವೆ.
ಇದೇ ಸಂದರ್ಭದಲ್ಲಿ ಸಿ.ಬಿ.ಟಿ ಬಸ್ ನಿಲ್ದಾಣದಿಂದ ಅಮರಗೋಳದ ಎ.ಪಿ.ಎಂ.ಸಿ ಮಾರ್ಗವಾಗಿ ಸುತಗಟ್ಟಿ ಹಾಗೂ ಗಾಮಗಟ್ಟಿಗೆ ತೆರಳುವ ನಗರ ಸಂಚಾರ ಬಸ್ಗೆ ಸಿಎಂ ಚಾಲನೆ ನೀಡಿದರು. ಈ ವೇಳೆ ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ ಜೋಶಿ, ಕೈಮಗ್ಗ ಮತ್ತು ಜವಳಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ. ಬ.ಪಾಟೀಲ್ ಮುನೇನಕೂಪ್ಪ, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್, ಶಾಸಕರುಗಳಾದ ಅಬ್ಬಯ್ಯ ಪ್ರಸಾದ್, ಸಲೀಂ ಅಹಮದ್, ಎ.ಪಿ.ಎಂ.ಸಿ ಅಧ್ಯಕ್ಷ ಸುರೇಶ್ ಎಂ ಕಿರೇಸೂರು, ಉಪಾಧ್ಯಕ್ಷ ಬಸವರಾಜ ನಾಯ್ಕರ್, ಹುಡಾ ಅಧ್ಯಕ್ಷ ನಾಗೇಶ್ ಕಲ್ಬುರ್ಗಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
