ಎಷ್ಟೇ ವೆಚ್ಚವಾದ್ರೂ ಎತ್ತಿನ ಹೊಳೆ ಯೋಜನೆ ಕಾರ್ಯಗತ: ಸಿಎಂ ಬೊಮ್ಮಾಯಿ

ಬೆಂಗಳೂರು: ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನ ಹೊಳೆ ಯೋಜನೆಯನ್ನು ಎಷ್ಟೇ ಹಣ ವೆಚ್ಚವಾದರೂ ಕಾರ್ಯಗತ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಡಾ.ಜಿ.ಪರಮೇಶ್ವರ್ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಪ್ರಮುಖವಾಗಿ ಭೂಸ್ವಾಧೀನ ಸಮಸ್ಯೆಯನ್ನು ಪರಿಹರಿಸಬೇಕಿದೆ. ಸಮತೋಲಿತ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಿಸಬೇಕಿದೆ. ಹೀಗಾಗಿ 12 ಸಾವಿರ ಕೋಟಿ ರೂಪಾಯಿಗಳ ಯೋಜನೆ. 23 ಸಾವಿರ ಕೋಟಿ ರೂಪಾಯಿಗೆ ಏರಿಕೆ ಯಾಗಿದೆ ಎಂದರು.
ಯೋಜನೆಯ ಉದ್ದೇಶ ಸಫಲವಾಗಬೇಕಿದ್ದರೆ, ಜಲಾಶಯಗಳ ಸಾಮರ್ಥ್ಯಯವನ್ನು ಹೆಚ್ಚಿಸದಿದ್ದರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಲು ಸಂಕಲ್ಪ ಮಾಡಿದ್ದು ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಹೇಳಿದರು.
ಇದಕ್ಕೂ ಮುನ್ನ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಎತ್ತಿನ ಹೊಳೆ ಪ್ರದೇಶಕ್ಕೆ ತಾವು ಭೇಟಿ ನೀಡಿದ್ದು ಕೆಲವು ಕಡೆ ಭೂಸ್ವಾಧೀನ ಸಮಸ್ಯೆಯನ್ನು ಬಗೆ ಹರಿಸಲಾಗಿದೆ. ಮತ್ತೆ ಕೆಲವು ಕಡೆ ಸಮಸ್ಯೆ ಬಗೆಹರಿಸಲು ಭೂಸ್ವಾಧೀನ ಅಧಿಕಾರಿಗಳಿಗೆ ಗಡವು ನೀಡಲಾಗಿದೆ. ಶೇ.90ರಷ್ಟು ಕಾಮಗಾರಿ ಮುಗಿದಿದೆ. ಇನ್ನೂ ಅನೇಕ ಸಣ್ಣಪುಟ್ಟ ಸಮಸ್ಯೆಗಳಿವೆ. ಇದನ್ನು ಪರಿಹರಿಸಲು ಈ ಭಾಗದ ಎಲ್ಲಾ ಶಾಸಕರ ಸಭೆ ಕರೆದು ಚರ್ಚೆ ಮಾಡಿ ಪ್ರಾಯೋಗಿಕವಾಗಿ ನೀರು ಹರಿಸಿ ಜನರಲ್ಲಿ ವಿಶ್ವಾಸ ಮೂಡಿಲಾಗುವುದು ಎಂದು ತಿಳಿಸಿದರು.
ಭೂ ಸ್ವಾಧೀನ ವಿಚಾರದಲ್ಲಿ ವಿಳಂಬ ಮತ್ತು ಹಣ ಹಾಗೂ ರೈತರ ಸಹಕಾರ ವಿಚಾರದಲ್ಲಿ ಪರಮೇಶ್ವರ್ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ತುಮಕೂರು ಜಿಲ್ಲೆ ಕೊರಟಗೆರೆ ಕ್ಷೇತ್ರದಲ್ಲಿ ಭೂ ಸ್ವಾಧೀನ ಸಮಸ್ಯೆಗೆ ನೀವೆ ಕಾರಣ ಎಂದು ಸಚಿವ ಮಾಧುಸ್ವಾಮಿ ನೇರ ಆರೋಪ ಮಾಡಿದರು. ಇದರಿಂದಾಗಿ ಸದನದಲ್ಲಿ ಕೆಲಕಾಲ ಪರಮೇಶ್ವರ್ ಮತ್ತು ಸಚಿವ ಮಾಧುಸ್ವಾಮಿ ನಡುವೆ ಬಿರುಸಿನ ಮಾತಿನ ಚಕಮಕಿ ನಡೆಯಿತು.
ಇದಕ್ಕೂ ಮುನ್ನ ವಿಷಯ ಪ್ರಾಸ್ತಾಪಿಸಿದ ಪರಮೇಶ್ವರ್, 12 ಸಾವಿರ ಕೋಟಿ ಯೋಜನೆ 23 ಸಾವಿರ ಕೋಟಿ ರೂಪಾಯಿಗೇರಲು ಕಾರಣ ಯಾರು ? ಕೇವಲ 315 ಕೋಟಿ ರೂಪಾಯಿ ವೆಚ್ಚ ಮಾಡಿ ಭೂಸ್ವಾಧೀನ ಸಮಸ್ಯೆ ಬಗೆ ಹರಿಸಿದರೆ ಯೋಜನೆ ಕಾರ್ಯಗತವಾಗುತ್ತದೆ ಎಂದು ಹೇಳಿದರು.
