ಹಾವು ತಪ್ಪಿಸಲು ಹೋಗಿ ನಾಲೆಗೆ ಬಿದ್ದ ಕಾರು : ಸ್ಥಳದಲ್ಲೇ ಪತ್ನಿ ಸಾವು, ಪತಿ ಪಾರು

ಶಿವಮೊಗ್ಗ : ಅಡ್ಡ ಬಂದ ಹಾವನ್ನು ತಪ್ಪಿಸಲು ಹೋಗಿ ಕಾರೊಂದು ತುಂಗಾ ಎಡದಂಡೆ ನಾಲೆಗೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ 3 ಗಂಟೆಯ ಸುಮಾರಿಗೆ ಗಾಜನೂರು ಬಳಿ ನಡೆದಿದೆ.
ನೀರಿನಲ್ಲಿ ಮುಳುಗಿ ಸುಷ್ಮಾ( 28) ಎಂಬವರು ಮೃತಪಟ್ಟಿದ್ದು, ಚಾಲನೆ ಮಾಡುತ್ತಿದ್ದ ಪತಿ ಚೇತನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚೇತನ್ ತಾಯಿಯ ಅನಾರೋಗ್ಯದ ವಿಷಯ ಗೊತ್ತಾಗಿ ತಡರಾತ್ರಿಯೇ ದಂಪತಿ ಶಿವಮೊಗ್ಗದಿಂದ ತುಮಕೂರಿಗೆ ಹೊರಟಿದ್ದರು ಎಂದು ತಿಳಿದು ಬಂದಿದೆ.
ನಾಲೆಯ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರಿಗೆ ಹಾವು ಅಡ್ಡಬಂದಿದ್ದರಿಂದ ಚೇತನ್ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಕಾರು ನಾಲೆಗೆ ಉರುಳಿದೆ ಎನ್ನಲಾಗಿದೆ. ಈ ವೇಳೆ ಚೇತನಕುಮಾರ್ ಸಹಾಯಕ್ಕಾಗಿ ಕೂಗಿ ಕೊಂಡಿದ್ದಾರೆ. ಶಬ್ದದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸ್ಥಳೀಯರು ಚೇತನ್ ಅವರನ್ನು ರಕ್ಷಣೆ ಮಾಡಿದ್ದು, ಕಾರಿನೊಳಗೆ ನೀರು ತುಂಬಿದ್ದರಿಂದ ಅಷ್ಟರಲ್ಲಾಗಲೇ ಸುಷ್ಮಾ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
