
ಲಖ್ನೋ: ಉತ್ತರ ಪ್ರದೇಶ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿಗೆ ಉತ್ತರಪ್ರದೇಶದಲ್ಲಿ ದೊಡ್ಡ ಆಘಾತ ಉಂಟಾಗಿದೆ. ಪಕ್ಷದ ಹಿರಿಯ ನಾಯಕ ಹಾಗೂ ಸಂಪುಟ ದರ್ಜೆ ಸಚಿವ ದೇವಿ ಪ್ರಸಾದ್ ಮೌರ್ಯ ಪಕ್ಷಕ್ಕೆ ರಾಜಿನಾಮೆ ನೀಡಿ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಇದರಿಂದ ಉತ್ತರ ಪ್ರದೇಶದಲ್ಲಿ ಚುನಾವಣೆ ಹೊಸ್ತಲಲ್ಲಿರುವ ಬಿಜೆಪಿಗೆ ದೊಡ್ಡ ಆಘಾತ ಉಂಟಾದಂತಾಗಿದೆ. ಮೌರ್ಯ ಅವರೊಂದಿಗೆ ಅವರ ಬೆಂಬಲಿಗ ಮೂವರು ಶಾಸಕರು ಮತ್ತು ಹಲವು ಮುಖಂಡರು ಕೇಸರಿ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿ ಗುಡ್ ಬೈ ಹೇಳಿದ್ದಾರೆ.
ಈ ನಡುವೆ ಮೌರ್ಯ ಅವರ ಮನವೊಲಿಸಿ ಪಕ್ಷದಲ್ಲೇ ಅವರನ್ನು ಉಳಿಸಿಕೊಳ್ಳಲು ಹರಸಾಹಸ ನಡೆಸಿದೆ. ದಲಿತರು, ಹಿಂದುಳಿದವರು, ರೈತರು, ನಿರುದ್ಯೂಗಿ ಯುವಜನರು,ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಬಗ್ಗೆ ವಹಿಸಿದ ತೀವ್ರ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಂಪುಟಕ್ಕೆ ನೀಡುತ್ತೇನೆ ಎಂದು ರಾಜಿನಾಮೆ ಪತ್ರ ಸಮೇತ ಅವರು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ನೇತಾರ ಅಖಿಲೇಶ್ ಯಾದವ್, ಮೌರ್ಯ ಅವರಿಗೆ ಭವ್ಯ ಸ್ವಾಗತ ಕೋರಿದ್ದಾರೆ. ಮೌರ್ಯ ಅವರೊಂದಿಗೆ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವ ಎಲ್ಲಾ ಮುಖಂಡರು ಕಾರ್ಯಕರ್ತರಿಗೆ ಸ್ವಾಗತಿಸುತ್ತೇನೆ. 2022ರಲ್ಲಿ ಸಾಮಾಜಿಕ ಕ್ರಾಂತಿ ಉಂಟಾಗಲಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಹಿಂದುಳಿದ ವರ್ಗದ ಪ್ರಬಲ ನಾಯಕರಾಗಿರುವ ಮೌರ್ಯ , 2016ರಲ್ಲಿ ಬಿಎಸ್ ಪಿ ತೊರೆದು ಬಿಜೆಪಿ ಸೇರಿದ್ದರು. ಆರು ಬಾರಿ ಶಾಸಕರಾಗಿದ್ದರು. ಪ್ರಸ್ತುತ ಪೂರ್ವ ಉತ್ತರ ಪ್ರದೇಶದ ಪದ್ರೌನಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ಪುತ್ರಿ ಸಂಘಮಿತ್ರಾ ಪ್ರಸಕ್ತ ಬಿಜೆಪಿ ಸಂಸದರಾಗಿದ್ದಾರೆ.
