ಹಿಂದೂ ಯುವಕರ ಕೊಲೆಗೆ ಯತ್ನ: ಕ್ರಮಕ್ಕೆ ಆಗ್ರಹ

ಬೀದರ್: ಹಿಂದೂ ಯುವಕರ ಕೊಲೆಗೆ ಹುನ್ನಾರ ನಡೆಸಿರುವ ನಗರದ ಎಂ.ಡಿ. ಇಮ್ರಾನ್ಖಾನ್ ಹಾಗೂ ಫಾರೂಕ್ ಖಾನ್ ಅಹಮ್ಮದ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಪರಿಷತ್ ಜಿಲ್ಲಾ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಎಂ.ಡಿ. ಇಮ್ರಾನ್ಖಾನ್ ಹಾಗೂ ಫಾರೂಕ್ ಖಾನ್ ಅಹಮ್ಮದ್ ಅವರು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ನರೇಶ ಗೌಳಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದರು.
ಮಹಮೂದ್ ಗವಾನ್ ಮದರಸಾದಲ್ಲಿ ಮುಸ್ಲಿಮ್ ಪ್ರಮುಖರು ಅಕ್ರಮಕೂಟ ರಚಿಸಿಕೊಂಡು ಸೇರಿ ನಾಳೆ ನಮಾಜ್ ಮುಗಿಸಿದ ನಂತರ ಹಿಂದೂಗಳ ಮನೆಗೆ ನುಗ್ಗಿ ಹತ್ಯೆ ಮಾಡುತ್ತೇವೆ ಎಂದು ಹೇಳಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ದೂರಿದರು.
ಸಮಾಜದಲ್ಲಿ ಸೌಹಾರ್ದ ಕದಡಲು ಹಾಗೂ ಅಶಾಂತಿ ಉಂಟು ಮಾಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣ ಸಾಳೆ, ಮುಖಂಡ ಈಶ್ವರಸಿಂಗ್ ಠಾಕೂರ್, ಹಿಂದೂ ಜಾಗರಣ ವೇದಿಕೆಯ ಕಲಬುರಗಿ ವಿಭಾಗ ಸಂಯೋಜಕ ಶಿವಶರಣಪ್ಪ ಪಾಟೀಲ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ನೌಬಾದೆ, ಪ್ರಮುಖರಾದ ಸೋಮಶೇಖರ ಪಾಟೀಲ ಗಾದಗಿ, ಡಾ. ವೀರೇಂದ್ರ ಶಾಸ್ತ್ರಿ, ಕಪಿಲ್ ಹೂಗಾರ, ರಾಜಕುಮಾರ ಅಳ್ಳೆ, ಸಂಗೀತಾ ತಗಾರೆ, ನರಸಿಂಹ ಕಾರಂತ, ಯೋಗೇಶ ಪಾಟೀಲ ನಿಯೋಗದಲ್ಲಿದ್ದರು.
