ಡ್ರಗ್ಸ್ ಮಾಫಿಯಾ ಬಗ್ಗು ಬಡಿಯಲು ಸಾರ್ವಜನಿಕರೂ ಕೈ ಜೋಡಿಸಬೇಕು: ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಯುವಜನರನ್ನು ಗುರಿಯಾಗಿಸಿ ಸಮಾಜ ಘಾತುಕ ಕೃತ್ಯ ನಡೆಸುವ ಡ್ರಗ್ ಮಾಫಿಯಾವನ್ನು ರಾಜ್ಯದಲ್ಲಿ ಬಗ್ಗು ಬಡಿಯಲು ಸರಕಾರ ಬದ್ಧವಾಗಿದ್ದು, ಸಾರ್ವಜನಿಕರೂ ಈ ನಿಟ್ಟಿನಲ್ಲಿ, ಪೋಲೀಸರ ಜೊತೆ ಕೈಜೋಡಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕರೆ ನೀಡಿದ್ದಾರೆ.
ವಿಧಾನ ಪರಿಷತ್ತಿನಲ್ಲಿಂದು ಶೂನ್ಯ ವೇಳೆಯಲ್ಲಿ, ಜೆಡಿಎಸ್ ಸದಸ್ಯ ಅಪ್ಪಾಜಿ ಗೌಡ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಪೊಲೀಸರು, ಡ್ರಗ್ ಮಾಫಿಯಾದ ಮೂಲೋತ್ಪಾದನೆ ಮಾಡಲು ಕಟಿಬದ್ಧರಾಗಿದ್ದು, ಈಗಾಗಲೇ, ದಾಖಲೆಯ ಪ್ರಮಾಣದಲ್ಲಿ ಅಕ್ರಮ ಡ್ರಗ್ಸ್ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಡ್ರಗ್ ಮಾಫಿಯಾ ಜಾಲವನ್ನು ನಿರ್ಮೂಲನೆ ಮಾಡಲು, ಹಾಗೂ ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಿ, ಬಂಧಿಸಲು ಅನುಕೂಲವಾಗುವಂತೆ, ಸಾರ್ವಜನಿಕರೂ ಸಹಕರಿಸಬೇಕು ಎಂದು ಮನವಿ ಮಡಿದ ಸಚಿವರು ಪೊಲೀಸರಿಗೆ, ಅಗತ್ಯ ಮಾಹಿತಿ ಒದಗಿಸಿದರೆ ಡ್ರಗ್ ಮಾಫಿಯಾವನ್ನು ಬುಡ ಸಮೇತ ಕಿತ್ತುಹಾಕಬಹುದು ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯ, ಪ್ರಕಾಶ್ ರಾಥೋಡ್ ಅವರು ಪ್ರಸ್ತಾಪಿಸಿದ, ಹೆಣ್ಣು ಶಿಶು ಮಕ್ಕಳ ಮಾರಾಟ ಜಾಲದ ಬಗ್ಗೆ, ಸಚಿವರು, ವಿಜಯಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ವರದಿ ತರಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
