ಅಪ್ಪು ‘ಗಂಧದ ಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ: ಬಸವರಾಜ ಬೊಮ್ಮಾಯಿ

ಬೆಂಗಳೂರು: ”ಅಪ್ಪು ಅವರಂತೆ ಈ ಸಿನೆಮಾ ಮುಂದಿನ ಪೀಳಿಗೆಗೆ ಒಂದು ದಂತಕಥೆಯಾಗಲಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತ ಪಡಿಸಿದರು.
ಶುಕ್ರವಾರ ಸಂಜೆ ಪುನೀತ್ ರಾಜ್ಕುಮಾರ್ ಅವರ ‘ ಗಂಧದ ಗುಡಿ ‘ ಚಿತ್ರ ಬಿಡುಗಡೆಯ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಿ ಮಾತನಾಡಿದರು.
ಮುಂದಿನ ಪೀಳಿಗೆಗೆ ನಿಸರ್ಗದ ಬಗ್ಗೆ ಜಾಗೃತಿ ಮೂಡಿಸಲು, ಅದರ ಸಂರಕ್ಷಣೆ ಮಾಡಲು ಪ್ರೇರಣೆ ನೀಡುವ ‘ಗಂಧದ ಗುಡಿ’ ಚಲನಚಿತ್ರಕ್ಕೆ ಸರ್ಕಾರ ತೆರಿಗೆ ವಿನಾಯಿತಿಯನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
‘ಕನ್ನಡ ನಾಡು ಮತ್ತು ಗಂಧದ ಗುಡಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅಂತಹ ವಿಚಾರದೊಂದಿಗೆ, ಕಾಡು, ನಿಸರ್ಗ, ಪ್ರಾಣಿಗಳನ್ನು ಇಟ್ಟುಕೊಂಡು ಅಪ್ಪು ಮಾಡಿದ ಈ ಸಿನೆಮಾ ಅತ್ಯಂತ ಪ್ರಸ್ತುತವಾಗಿದೆ. ನಿಸರ್ಗವನ್ನು ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುವ ಅವಶ್ಯಕತೆ ಇದೆ. ಇಲ್ಲವಾದರೆ ಮುಂದಿನ ಜನಾಂಗದ ಭವಿಷ್ಯದಲ್ಲಿ ಕಳ್ಳತನ ಮಾಡಿದಂತೆ” ಎಂದು ಅಭಿಪ್ರಾಯ ಪಟ್ಟರು.
ಅಣ್ಣಾವ್ರ ಎಲ್ಲಾ ಗುಣಗಳನ್ನು ಅಪ್ಪು ಹೊಂದಿದ್ದರು!
“ಮನಸುಗಳು ಭಾವನಾತ್ಮಕವಾದ ಶಬ್ದಗಳ ತೂಕ ಕಡಿಮೆ. ಅಪ್ಪು ನಮ್ಮ ಜೊತೆಗೆ ಇದ್ದಾರೆ. ಪ್ರತಿ ಕ್ಷಣ ನಮ್ಮನ್ನು ನೋಡ್ತಾ ಇರ್ತಾರೆ. ಇರುವಾಗ ಹೊಗಳುವುದು ಸಹಜ. ಇಲ್ಲದೇ ಇರುವಾಗ ನೆನಪು ಮಾಡಿಕೊಳ್ಳುವುದು ದೈವದ ಆಶೀರ್ವಾದ ಇದ್ದರೆ ಮಾತ್ರ ಸಾಧ್ಯ. ಅಂತಹ ಆಶೀರ್ವಾದ ಅಪ್ಪು ಮೇಲಿ”ತ್ತು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
