ಹಿಂದಿ ಭಾಷೆಯ ಕುರಿತು ನಟ ಸುದೀಪ್ ನಡೆದುಕೊಂಡ ರೀತಿ ಸರಿ ಇದೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ : ಹಿಂದಿ ಭಾಷೆ ಹೇರಿಕೆ ವಿಚಾರವಾಗಿ ನಟ ಸುದೀಪ್ ನಡೆದುಕೊಂಡ ರೀತಿ ಹಾಗೂ ಅವರು ಹೇಳಿರುವುದು ಸರಿಯಿದೆ. ಭಾಷಾವಾರು ಪ್ರಾಂತವಾರು ಆದ ಮೇಲೆ ಎಲ್ಲವೂ ಮಾತೃಭಾಷೆ ಆಗಿದೆ ಎನ್ನುವ ಮೂಲಕ ನಟ ಸುದೀಪ್ ಅವರ ನಡೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಂಬಲ ವ್ಯಕ್ತಪಡಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲಾ ರಾಜ್ಯಗಳಲ್ಲಿ ಅವರವರ ಸ್ಥಳೀಯ ಭಾಷೆ ಸಾರ್ವಭೌಮ ಆಗಿರುತ್ತದೆ. ಹಾಗೇ ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮವಾಗಿದೆ. ಹಾಗಾಗಿ ಈ ವಿಚಾರದಲ್ಲಿ ನಟ ಸುದೀಪ ನಡೆದುಕೊಂಡಿರುವುದು ಸರಿ ಇದೆ ಎಂದರು.
ಕೋವಿಡ್ 4ನೇ ಅಲೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ
ಕಳೆದ ಏಪ್ರಿಲ್ 9 ರ ನಂತರ ವೈರಸ್ ಪಾಸಿಟಿವ್ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡು ಬಂದಿರುವುದನ್ನು ಗಮನಿಸಲಾಗುತ್ತಿದೆ. ಈಗ ವೈರಸ್ ಹರಡುವಿಕೆ ತಡೆಯಲು ಏನೆಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಅದನ್ನು ಕೂಡಾ ಕೈಗೊಳ್ಳಲಾಗುತ್ತಿದೆ. ಇನ್ನೂ ಯುರೋಪ್ ಮತ್ತು ಇತರೆ ರಾಷ್ಟ್ರಗಳಲ್ಲಿ ಯಾರು ಕೋವಿಡ್ ವ್ಯಾಕ್ಸಿನೇಷನ್ ತೆಗೆದುಕೊಂಡಿಲ್ಲ ಅವರಲ್ಲಿ ಹೆಚ್ಚಾಗಿ ವೈರಸ್ ಪಾಸಿಟಿವ್ ಕಂಡು ಬರುತ್ತಿದೆ. ಈಗಾಗಲೇ ನಮ್ಮ ರಾಜ್ಯದಲ್ಲಿ 98% ಜನರಿಗೆ ಎರಡು ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ. ಈಗ ಬೂಸ್ಟರ್ ಡೋಸ್ ನೀಡಲಾಗುತ್ತಿದೆ.
ಮಕ್ಕಳ ಆರೋಗ್ಯ ದೃಷ್ಠಿಯಿಂದ ಕೇಂದ್ರ ಸರ್ಕಾರ 6 ವರ್ಷದಿಂದ12 ವರ್ಷದ ಮಕ್ಕಳಿಗೆ ವ್ಯಾಕ್ಸಿನೇಷನನ್ನು ಈಗಾಗಲೇ ಅಪ್ರೂವ್ ಮಾಡಿದ್ದಾರೆ, ಅದನ್ನು ರಾಜ್ಯದ ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡುವ ನಿಟ್ಟಿನಲ್ಲಿ ಕಳೆದ ದಿನ ತೀರ್ಮಾನ ಮಾಡಲಾಗಿದೆ. ಕೋವಿಡ್ ವ್ಯಾಕ್ಸಿನೇಷನ್ಗೆ ರಾಜ್ಯದಲ್ಲಿ ಹೆಚ್ಚು ಮಹತ್ವ ನೀಡಲಾಗುತ್ತಿದೆ. ರಾಜ್ಯದಲ್ಲಿ ಟೆಸ್ಟ್ಗಳನ್ನು ಕೂಡಾ ಹೆಚ್ಚು ಮಾಡಲಾಗುತ್ತಿದೆ, ಆಸ್ಪತ್ರೆಯಲ್ಲಿ ಜ್ವರ, ನೆಗಡಿ, ಕೆಮ್ಮಿನಿಂದ ದಾಖಲಾದವರಿಗೆ ಹೆಚ್ಚು ಒತ್ತು ಕೊಟ್ಟು ಟೆಸ್ಟ್ ಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು.
ನಾಳೆ ರಾತ್ರಿ (ಏಪ್ರಿಲ್ 29) ದೆಹಲಿಗೆ ಹೋಗುತ್ತಿದ್ದೇನೆ
ಏಪ್ರಿಲ್ 30 ರಂದು ದೆಹಲಿಯಲ್ಲಿ ಚೀಫ್ ಜಸ್ಟೀಸ್ ಹಾಗೂ ಚೀಫ್ ಮಿನಿಸ್ಟರ್ ಸಮ್ಮೇಳನ ನಡೆಯಲಿದೆ. ಹಾಗಾಗಿ ನಾಳೆ ಏಪ್ರಿಲ್ 29 ರಂದು ಸಂಜೆ ದೆಹಲಿಗೆ ತೆರಳುತ್ತಿದ್ದೇನೆ. ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಅವರೇ ಉದ್ಘಾಟನೆ ಮಾಡಲಿದ್ದಾರೆ. ಈ ವೇಳೆ ನ್ಯಾಯಾಂಗದ ಹಲವು ವಿಚಾರಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು
