ವೈದ್ಯಕೀಯ ಶಿಕ್ಷಣ ಮುಂದುವರಿಸಲು ಅವಕಾಶ ಕೋರಿ ಸರ್ಕಾರಕ್ಕೆ ಮನವಿ ಮಾಡಿದ ವಿದ್ಯಾರ್ಥಿ

ಮೈಸೂರು: ವೈದ್ಯನಾಗಬೇಕು ಎಂಬ ಉದ್ದೇಶದಿಂದ ಉಕ್ರೇನ್ಗೆ ತೆರಳಿದ್ದ ಮೈಸೂರಿನ ಯುವಕನ ಕನಸು ರಷ್ಯಾ ಹಾಗೂ ಉಕ್ರೇನ್ ಯುದ್ಧದಿಂದ ಕಮರಿದೆ. ಜಾಫರೋಜಿಯಾ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಎಂಬಿಬಿಎಸ್ ಓದುತ್ತಿದ್ದ ಪ್ರಜ್ವಲ್ ಇದೀಗ ಸರ್ಕಾರಕ್ಕೆ ಮನವಿಯೊಂದನ್ನ ಮಾಡಿದ್ದಾರೆ.
ಹುಣಸೂರಿನ ಉದಯಗಿರಿ ಬಡಾವಣೆಯ ನಿವಾಸಿ ಕಪನಯ್ಯ ಹಾಗೂ ಪ್ರೇಮಾ ದಂಪತಿಯ ಪುತ್ರ ಪ್ರಜ್ವಲ್ ವೈದ್ಯನಾಗಬೇಕು ಎಂದು ಉಕ್ರೇನ್ಗೆ ತೆರಳಿದ್ದರು. ಕಳೆದ ಮೂರು ವರ್ಷದಿಂದ ಜಾಫರೋಜಿಯಾದಲ್ಲಿ ಎಂಬಿಬಿಎಸ್ ಮಾಡುತ್ತಿದ್ದ ಪ್ರಜ್ವಲ್ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದಾಗ ತವರಿಗೆ ಮರಳಿದ್ದಾರೆ. ಮೈಸೂರಿನ ಸೆಕ್ಯೂರಿಟಿ ಏಜೆನ್ಸಿಯಲ್ಲಿ ನೌಕರನಾಗಿರುವ ಕಪನಯ್ಯ ಮಗ ವೈದ್ಯನಾಗ ಬೇಕು ಎಂಬ ಆಸೆಯಿಂದ ಉಕ್ರೇನ್ಗೆ ಕಳುಹಿಸಿದ್ದರು. ಆದರೆ ಇದೀಗ ಮಗನ ಮುಂದಿನ ವಿದ್ಯಾಭ್ಯಾಸದ ಕುರಿತಾಗಿ ಪ್ರಜ್ವಲ್ ಹಾಗೂ ಹೆತ್ತವರು ಚಿಂತೆಗೀಡಾಗಿದ್ದಾರೆ.
ಯುದ್ಧದಿಂದ ಹುಟ್ಟೂರಿಗೆ ವಾಪಸ್ ಆಗಿರುವ ಪ್ರಜ್ವಲ್ ವೈದ್ಯಕೀಯ ಶಿಕ್ಷಣ ಮುಂದುವರಿಸಲು ಪರದಾಡುವಂತಾಗಿದೆ. ಹೀಗಾಗಿ, ನಮ್ಮ ದೇಶದಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
