ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಸಮಿತಿ ವರದಿ ಆಧರಿಸಿ ಕ್ರಮ: ಸಿಎಂ ಭರವಸೆ

ದಾವಣಗೆರೆ: ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಲು ಈಗಾಗಲೇ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಹರಿಹರದ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತೀಕರಣ, ಉದಾರೀಕರಣ, ಖಾಸಗಿಕರಣದ ಜೊತೆಗೆ ಮನಸ್ಸಿನಲ್ಲಿ ಅಂತಃಕರಣ ಸ್ಥಾಪಿಸುವ ಅಗತ್ಯವಿದೆ. ಪ್ರಸಕ್ತ ದಿನಗಳಲ್ಲಿ ಸಾಮಾಜಿಕವಾಗಿ ಎಲ್ಲಾ ಚಟುವಟಿಕೆಗಳನ್ನು ವ್ಯವಹಾರದ ದೃಷ್ಠಿಯಿಂದಲೇ ಮಾರುಕಟ್ಟೆ ತೀರ್ಮಾನ ಮಾಡುತ್ತಿವೆ. ಸಮಾಜಕ್ಕೆ ಸಂಸ್ಕಾರ ಸಂಸ್ಕೃತಿ ಶಿಕ್ಷಣ ಉದ್ಯೋಗ ಸ್ವಾವಲಂಬನೆಯ ಅಗತ್ಯವಿದೆ. ಒಳ್ಳೆಯ ಕೆಲಸ ಮಾಡುವವರನ್ನು ಗುರುತಿಸಿದರೆ ಉತ್ತಮ ವಾತಾವರಣ ನಿರ್ಮಾಣ ಸಾಧ್ಯ. ಮಕ್ಕಳಿಗೆ ಏನು ಮಾಡಬಾರದು ಎನ್ನುವುದನ್ನು ಹೇಳುತ್ತೇವೆ, ಆದರೆ ಏನು ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತಿಲ್ಲ ಎಂದರು.
ಎಲ್ಲರೂ ಒಗ್ಗೂಡಿ ನಡೆದಾಗ ಸಮಾಜ ಅಭಿವೃದ್ದಿ ಸಾಧ್ಯ, ಮನುಷ್ಯ ಇತಿಹಾಸದ ಭಾಗವಾಗಬೇಕು. ಇಲ್ಲವೆಂದರೆ ಇತಿಹಾಸ ನಿರ್ಮಿಸುವಂತಹ ಮಹತ್ಕಾರ್ಯಗಳನ್ನು ಮಾಡಬೇಕು. ನಾಡಿನ ನೆಲ ಜಲ ಭಾಷೆ ವಿಚಾರ ಬಂದಾಗ ಪಕ್ಷಾತೀತವಾಗಿ ಒಂದಾಗಿ ನಡೆಯುತ್ತೇವೆ. ಪಂಚಮಸಾಲಿ ಸಮುದಾಯವು ಸ್ವಾತಂತ್ರ್ಯ ಹೋರಾಟಕ್ಕೆ ಕಿತ್ತೂರು ರಾಣಿ ಚನ್ನಮ್ಮ, ಬೆಳವಾಡಿ ಮಲ್ಲಮ್ಮ, ಕೆಳದಿ ಚನ್ನಮ್ಮರಂತಹ ಮಹನೀಯರನ್ನು ನೀಡಿದೆ.
ಉನ್ನತ ಶಿಕ್ಷಣ, ಐಟಿಬಿಟಿ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ್ ಮಾತನಾಡಿ 21ನೇಯ ಶತಮಾನ ಜ್ಞಾನದ ಶತಮಾನ, ಜ್ಞಾನದ ಆಧಾರದ ಮೇಲೆ ದೇಶ ಅಭಿವೃದ್ಧಿ ಹೊಂದುತ್ತದೆ. ಗುಣಮಟ್ಟದ ಶಿಕ್ಷಣ ಪಡೆದರೆ ಪ್ರಗತಿಯ ದೇಶ ನಿರ್ಮಿಸಲು ಸಾಧ್ಯ. ರಾಜ್ಯದಲ್ಲಿ ತಂತ್ರಜ್ಞಾನದ ಬಳಕೆಯ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ, ಐಐಟಿ ಮಾದರಿಯಲ್ಲಿ ಏಳು ಇಂಜಿನಿಯರಿಂಗ್ ಕಾಲೇಜು ಅಭಿವೃದ್ಧಿ ಮಾಡಲಾಗುತ್ತಿದೆ. 2.5 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲ್ಯ ಶಿಕ್ಷಣ ನೀಡಲಾಗುತ್ತಿದೆ, ಕರ್ನಾಟಕದ ಪ್ರತಿ ಯುವಕರಿಗೂ ಉದ್ಯೋಗ ನೀಡುವ ಮೂಲ ಉದ್ದೇಶ ಸರ್ಕಾರಕ್ಕಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಗೂ ವಿಶ್ವವಿದ್ಯಾನಿಲಯ ಸ್ಥಾಪಿಸುವ ಗುರಿ ಹೊಂದಲಾಗಿದೆ, ಹಾಗಾಗಿ ಹೊಸದಾಗಿ ಐದು ವಿಶ್ವವಿದ್ಯಾನಿಲಯ ಪ್ರಾರಂಭ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಸಂಸದ ಡಾ. ಜಿ.ಎಂ ಸಿದ್ದೇಶ್ವರ, ಬಳ್ಳಾರಿಯ ಸಂಸದ ವೈ.ದೇವೇಂದ್ರಪ್ಪ, ಸಕ್ಕರೆ ಮತ್ತು ಜವಳಿ ಖಾತೆ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ವಾರಣಾಸಿ ಪದ್ಮಶ್ರೀ ಪುರಸ್ಕೃತ 126 ವರ್ಷದ ಮಹಾಯೋಗಿ ಶ್ರೀ ಸ್ವಾಮಿ ಶಿವಾನಂದರು, ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್, ಜಗಳೂರು ಶಾಸಕ ಎಸ್.ವಿ ರಾಮಚಂದ್ರ, ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
