ಪುನೀತ್ ರಾಜಕುಮಾರ್ ಸಮಾಧಿಗೆ ಭೇಟಿ ನೀಡಿದ ರೇಣುಕಾಚಾರ್ಯ; ನೇತ್ರದಾನಕ್ಕೆ ಸಂಕಲ್ಪ

ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋಕ್ಕೆ ಕುಟುಂಬ ಸಮೇತ ತೆರಳಿ ಅಕಾಲಿಕವಾಗಿ ಧೈವಾಧೀನರಾದ ಪವರ್ ಸ್ಟಾರ್, ನಟಸಾರ್ವಭೌಮ, ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ್ ಅವರ ಸಮಾಧಿ ಬಳಿ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಸಂಪ್ರದಾಯದಂತೆ ಹಣತೆಗಳನ್ನು ಹಚ್ಚಿ ಅಗಲಿದ ಮೇರು ನಟನಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಕುಟುಂಬ ನಮನ ಸಲ್ಲಿಸಿತು.
ಚಿಕ್ಕ ವಯಸ್ಸಿಗೆ ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿದ್ದ ಮರೆಯದ ಮಾಣಿಕ್ಯ ಪುನೀತ್ ರಾಜಕುಮಾರ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಅವರ ನಿಸ್ವಾರ್ಥ ಸಮಾಜ ಸೇವೆ ಹಾಗೂ ನೇತ್ರದಾನ ನಮಗೆ ಪ್ರೇರಣೆಯಾಗಿದ್ದು, ನಮ್ಮ ಕುಟುಂಬವೂ ಸಹ ನೇತ್ರದಾನ ಮಾಡಲು ನಿರ್ಧರಿಸಿದೆ ಎಂದು ಪ್ರಕಟಿಸಿದರು.
ಪುನೀತ್ ರಾಜ್ ಕುಮಾರ್ ಅವರು ಕೇವಲ ಸಿನಿಮಾ ನಟರಾಗಿ ಗುರುತಿಸಿಕೊಳ್ಳದೆ ಅವರು, ಅನೇಕ ಸಮಾಜ ಸೇವೆಗಳನ್ನು ಮಾಡಿದ್ದರು. ಆದ್ದರಿಂದಲೇ ಅವರು ಅತೀ ಚಿಕ್ಕ ವಯಸ್ಸಿನಲ್ಲೇ ಜನಪ್ರಿಯ ನಟರಾಗಿ ಬೆಳೆದರು. ಆನಾಥಶ್ರಮ, ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ, ಹಿರಿಯ ನಾಗರೀಕರಿಗೆ ಸಹಾಯ, ಬಡಮಕ್ಕಳಿಗೆ ಆರ್ಥಿಕ ನೆರವು, ದತ್ತು ಮಕ್ಕಳನ್ನು ಪಡೆದಿದ್ದು, ಸಂಘ ಸಂಸ್ಥೆಗಳಿಗೆ ಹಣಕಾಸಿನ ನೆರವು ಸೇರಿದಂತೆ ಹತ್ತು ಹಲವು ಸೇವೆಗಳನ್ನು ಮಾಡಿದ್ದಾರೆ.
ಅವರ ಸಾಮಾಜಿಕ ಸೇವೆಗಳನ್ನು ಪುನೀತ್ ರಾಜ ಕುಮಾರ್ ಸಹೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಜೊತೆ ಚರ್ಚೆಸಿ ನಮ್ಮ ಕೈಲಾದ ರೀತಿಯಲ್ಲಿ ಮುಂದುವರೆಸುತ್ತೇನೆ. ನಾವು ಕೂಡ ನಾನಾ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ. ಪುನೀತ್ ರಾಜ್ಕುಮಾರ್ ಅವರ ಸೇವೆಯಲ್ಲಿ ನಮ್ಮದೊಂದು ಅಳಿಲು ಸೇವೆ ಜೊತೆಗೂಡುತ್ತದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.



